ಇ-ಮೇಲ್ ಮೂಲಕ ಮತದಾನಕ್ಕೆ ಅವಕಾಶ: ಆಯೋಗಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಆದೇಶ
ಬೆಂಗಳೂರು, ಎ.2: ಇ-ಮೇಲ್ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಸರಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಅರ್ಜಿದಾರನಿಗೆ ಹೈಕೋರ್ಟ್ ಆದೇಶಿಸಿದೆ.
ವಕೀಲರು ಆಗಿರುವ ಅರ್ಜಿದಾರ ಮಿಟ್ಟೆ ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ವಕೀಲರೂ ಆಗಿರುವ ಅರ್ಜಿದಾರ ಮಿಟ್ಟೆ ನರಸಿಂಹಮೂರ್ತಿ ಅವರು ವಾದಿಸಿ, ಸರಕಾರಿ ನೌಕರರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಅದೇ ರೀತಿಯಾಗಿ ದೇಶದ ಎಲ್ಲ ಜನರಿಗೆ ಇ-ಮೇಲ್ ಮೂಲಕವೂ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಕೇಂದ್ರ ಸರಕಾರ ಹಾಗೂ ಕೇಂದ್ರ ಚುನಾವಣೆ ಆಯೋಗಕ್ಕೆ ನಿರ್ದೇಶಿಸಬೇಕೆಂದು ಪೀಠಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪ್ರತಿವಾದಿಗಳಿಗೆ ನಿರ್ದೇಶನ ನೀಡುವುದರಿಂದ ಯಾವುದೆ ಬದಲಾವಣೆಗಳೂ ಆಗುವುದಿಲ್ಲ. ಅಲ್ಲದೆ, ಇ-ಮೇಲ್ ಮೂಲಕ ಮತದಾನ ಮಾಡುವ ಸೂಕ್ತ ಸಮಯ ಇನ್ನೂ ಬಂದಿಲ್ಲ. ಹೀಗಾಗಿ, ನೀವೇ ಖುದ್ದಾಗಿ ಕೇಂದ್ರ ಸರಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಎಂದು ತಿಳಿಸಿತು. ಅರ್ಜಿದಾರರಾದ ಮಿಟ್ಟೆ ನರಸಿಂಹಮೂರ್ತಿ ಅವರು ಅರ್ಜಿಯನ್ನು ಪೀಠದಿಂದ ವಾಪಸ್ ಪಡೆದರು. ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.