ಎಸ್ಕೇಪ್ ಆರೋಪಿ ಹನುಮಂತಗೆ ನ್ಯಾಯಾಂಗ ಬಂಧನ
ಹಿರಿಯಡ್ಕ, ಎ.2: ಜೈಲಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸ ರಿಂದ ತಪ್ಪಿಸಿಕೊಂಡು ಪರಾರಿಯಾಗಿ ಮತ್ತೆ ಬಂಧಿಸಲ್ಪಟ್ಟ ಮೂಡುಸಗ್ರಿ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣದ ಪೋಕ್ಸೋ ಆರೋಪಿ ಬಾದಾಮಿ ತಾಲೂಕಿನ ಹನುಮಂತ(39)ನನ್ನು ಹಿರಿಯಡ್ಕ ಪೊಲೀಸರು ಇಂದು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಮಾ.30ರಂದು ಬಂಧಿಸಲ್ಪಟ್ಟ ಹುನುಮಂತ, ಮಾ.31ರಂದು ಮಣಿಪಾಲ ಪೊಲೀಸರು ಹಿರಿಯಡ್ಕ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ತಪ್ಪಿಸಿ ಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಗಲು ರಾತ್ರಿ ಹುಡುಕಾಟ ನಡೆಸಿದ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಎ.1ರಂದು ಸಂಜೆ ವೇಳೆ ಪೆರ್ಣಂಕಿಲ ಹಾಡಿಯಲ್ಲಿ ಹನುಮಂತನನ್ನು ಪತ್ತೆ ಹಚ್ಚಿ ಬಂಧಿಸಿದ್ದರು.
ಹಿರಿಯಡ್ಕ ಪೊಲೀಸರ ವಶದಲ್ಲಿದ್ದ ಹನುಮಂತನನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು. ಬಳಿಕ ಹಿರಿಯಡ್ಕ ಎಸ್ಸೈ ಸಂತೋಷ್ ಕಾಯ್ಕಿಣಿ ಖುದ್ದು ತಾವೇ ಸಿಬ್ಬಂದಿಗಳ ಜೊತೆ ಬಿಗಿ ಭದ್ರತೆ ಯಲ್ಲಿ ಹನುಮಂತನನ್ನು ಜೈಲಿಗೆ ಕರೆದೊಯ್ದರು. ಈಗಾಗಲೇ ಈತ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.