ಚುನಾವಣಾಧಿಕಾರಿಗಳ ಆದೇಶ: ವಿವಾದಿತ ಚೌಕಿದಾರ್ ಸ್ಟಿಕ್ಕರ್ ತೆರವು
ಉಡುಪಿ, ಎ.2: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರ ಕಾರುಗಳಲ್ಲಿನ ಚೌಕಿದಾರ್ ಸ್ಟಿಕ್ಕರ್ ಸಮರವು ತಾರಕ್ಕೇರಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅವುಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ.
ಬಿಜೆಪಿ ನಾಯಕರು ತಮ್ಮ ಕಾರುಗಳ ಹಿಂದೆ ‘ನಾನೂ ಚೌಕೀದಾರ್’(ಮೆ ಭೀ ಚೌಕೀದಾರ್) ಎಂಬ ಸ್ಟಿಕ್ಕರ್ಗಳನ್ನು ಅಂಟಿಸಿದ್ದರೆ, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕಾರುಗಳ ಹಿಂಬದಿಯಲ್ಲಿ ಚೌಕೀದಾರ್ ಚೆರ್ ಹೈ ಎಂಬ ಸ್ಟಿಕ್ಕರ್ ಹಾಕಿದ್ದರು.
ಹೀಗೆ ಇಬ್ಬರ ಮಧ್ಯೆ ಚೌಕಿದಾರ್ ಸಮರ ಏರ್ಪಟಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಚರ್ಚೆ, ಅವಹೇಳನಕ್ಕೆ ಕಾರಣವಾಗಿವೆ. ಈ ಬಗ್ಗೆ ಗಮನ ಹರಿಸಿದ ಚುನಾವಣಾಧಿಕಾರಿಗಳು ಈ ಎಲ್ಲ ಸ್ಟಿಕ್ಕರ್ಗಳನ್ನು ತೆರವುಗೊಳಿಸು ವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಅವುಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರೆದಿದೆ.
‘ಸಾರಿಗೆ ನಿಯಮಗಳ ಪ್ರಕಾರ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಲು ಅವಕಾಶ ಇಲ್ಲದಿರುವುದು ಮತ್ತು ಈ ಸ್ಟಿಕ್ಕರ್ ಹೆಸರಿನಲ್ಲಿ ಸಂಘರ್ಷ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಸ್ಟಿಕ್ಕರ್ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದಾರೆ. ಇದಕ್ಕೆ ಎರಡೂ ಪಕ್ಷದವರು ಸ್ಪಂದಿಸಿದ್ದು ತೆರವು ಕಾರ್ಯ ಮಾಡುತ್ತಿದ್ದಾರೆ’ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದ್ದಾರೆ.