ಮತದಾರರ ಮನೆ ಬಾಗಿಲಿಗೆ ತೆರಳಿ ವೋಟರ್ಸ್ಲಿಪ್ ವಿತರಿಸಿದ ಡಿಸಿ ಹೆಪ್ಸಿಬಾ ರಾಣಿ
ಉಡುಪಿ, ಎ. 2: ಜಿಲ್ಲೆಯಲ್ಲಿ ಎ.18ರಂದು ನಡೆಯುವ ಲೋಕಸಭಾ ಚುನಾವಣೆ ಅಂಗವಾಗಿ, ಉಡುಪಿಯ ಮಿಷನ್ ಕಾಂಪೌಂಡ್ ಮತ್ತು ಅಮ್ಮಣ್ಣಿ ರಾಮಣ್ಣ ಹಾಲ್ ಬಳಿಯ ಮತದಾರರರಿಗೆ, ಮತದಾರರ ಭಾವಚಿತ್ರವಿರುವ ವೋಟರ್ ಸ್ಲಿಪ್ಗಳನ್ನು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಸ್ವತಹ ಮನೆ ಬಾಗಿಲಿಗೆ ತೆರಳಿ ಮಂಗಳವಾರ ವಿತರಿಸಿದರು.
ಮತದಾರರಿಗೆ ವೋಟರ್ ಸ್ಲಿಪ್ ವಿತರಿಸಿದ ಜಿಲ್ಲಾಧಿಕಾರಿ, ಮತದಾರರಿಗೆ ಮತದಾನ ದಿನವನ್ನು ನೆನಪಿಸಿ ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು. ಮತಕೇಂದ್ರದಲ್ಲಿ ಮತದಾರರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಪಿಕ್ ಕಾರ್ಡ್ ಇಲ್ಲದ ಮತದಾರರು ವೋಟರ್ ಸ್ಲಿಪ್ ಜೊತೆಯಲ್ಲಿ ಚುನಾವಣಾ ಆಯೋಗ ಸೂಚಿಸಿರುವ 11 ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ತಪ್ಪದೇ ತೆಗೆದುಕೊಂಡು ಹೋಗಿ ಮತದಾನ ಮಾಡುವಂತೆ ತಿಳಿಸಿದರು.
ಮತದಾರರಿಗೆ ವಿವಿಪ್ಯಾಟ್ ಕುರಿತು ಮಾಹಿತಿಯನ್ನು ನೀಡಿದ ಜಿಲ್ಲಾಧಿಕಾರಿ, ಕುಟುಂಬದಲ್ಲಿ ಮತದಾನ ಅರ್ಹತೆ ಹೊಂದಿರುವ ಪ್ರತಿಯೊಬ್ಬರೂ ಮತದಾನ ಮಾಡುವಂತೆ ತಿಳಿಸಿದರು.ಯಾವುದೇ ಅ್ಯರ್ಥಿ ಕೇಳಿದರೂ ತಮ್ಮ ಮತದಾನದ ಗುಟ್ಟನ್ನು ಬಿಟ್ಟುಕೊಡದಂತೆ ತಿಳಿಸಿದ ಜಿಲ್ಲಾಧಿಕಾರಿ, ಯಾವುದೇ ವ್ಯಕ್ತಿ ಆಮಿಷ, ಉಡುಗೊರೆಗಳನ್ನು ನೀಡಿ ಪ್ರಭಾವ ಬೀರಲು ಯತ್ನಿಸಿದಲ್ಲಿ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದರು.
ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಬಳಿಯ ಮನೆಯಲ್ಲಿದ್ದ 97 ವರ್ಷದ ವೃದ್ದೆಯೊಬ್ಬರ ಮನೆಯೊಳಗೆ ತೆರಳಿ ವೋಟರ್ ಸ್ಲಿಪ್ ವಿತರಿಸಿದ ಜಿಲ್ಲಾಧಿಕಾರಿ, ಅಲ್ಲಿಯೇ ಇದ್ದ ಬಿ.ಎಲ್ಓಗೆ ವೃದ್ದರ ಹೆಸರನ್ನು ಗುರುತು ಮಾಡಿಕೊಂಡು, ಮತದಾನದ ದಿನ ಅವರನ್ನು ಮತಗಟ್ಟೆಗೆ ಕರೆದೊಯ್ಯಲು ವಾಹನ ವ್ಯವಸ್ಥೆ ಹಾಗೂ ಮತದಾನ ಮಾಡಲು ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸು ವಂತೆ ಸೂಚಿಸಿದರು.
ಪ್ರತಿ ಮನೆಗಳಲ್ಲಿ ಮತದಾರರ ವೋಟರ್ ಸ್ಲಿಪ್ಗಳನ್ನು ಪರಿಶೀಲಿಸಿ ವಿತರಿಸಿದ ಜಿಲ್ಲಾಧಿಕಾರಿ, ಬಿಎಲ್ಓಗಳು ಆದಷ್ಟು ಶೀಘ್ರದಲ್ಲಿ ಎಲ್ಲಾ ಮತದಾರರಿಗೆ ವೋಟರ್ ಸ್ಲಿಪ್ ವಿತರಣೆ ಕಾರ್ಯ ಮುಗಿಸುವಂತೆ ಹಾಗೂ ಯಾವುದೇ ಮತದಾರರು ವೋಟರ್ ಸ್ಲಿಪ್ನಿಂದ ವಂಚಿತರಾಗದಂತೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಉಡುಪಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಮತ್ತಿತರರು ಉಪಸ್ಥಿತರಿದ್ದರು.