ಎ. 5: ಫಾದರ್ ಮುಲ್ಲರ್ ಹೋಮಿಯೋಪಥಿ ಪದವಿ ಪ್ರದಾನ
ಮಂಗಳೂರು, ಎ.2: ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಹೋಮಿಯೋಪಥಿ ವೈದ್ಯಕೀಯ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳ 29ನೇ ಪದವಿ ಪ್ರದಾನ ಸಮಾರಂಭವು ಎ.5ರಂದು ಮಧ್ಯಾಹ್ನ 2:30ಕ್ಕೆ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ನಲ್ಲಿ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ನಿರ್ದೇಶಕ ವಂ.ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ‘ಗುಣ ಪಡಿಸು ಮತ್ತು ಸಾಂತ್ವನಿಸು’ ಎಂಬ ಧ್ಯೇಯೋಕ್ತಿಯೊಂದಿಗೆ ಕಳೆದ 139 ವರ್ಷಗಳಿಂದ ಸಾಮಾಜಿಕ ಹಾಗೂ ಆರೋಗ್ಯ ಸೇವೆಯನ್ನು ನೀಡುತ್ತಿದೆ ಎಂದರು.
ಈ ಮಹಾವಿದ್ಯಾಲಯವು ಹೋಮಿಯೋಪಥಿ ವೈದ್ಯಕೀಯ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿಯಲ್ಲಿ 7 ವಿಶೇಷತೆಗಳನ್ನು ಹೊಂದಿ ರುವ ಏಕೈಕ ಮಹಾವಿದ್ಯಾಲಯವಾಗಿದೆ. ಹಲವಾರು ಸಂಶೋಧನಾ ಚಟುವಟಿಕೆಗಳಲ್ಲಿ ಸಂಸ್ಥೆಯ ಶಿಕ್ಷಕ ಸಿಬ್ಬಂದಿ, ಹೋಮಿಯೋಪಥಿ ಸ್ನಾತಕೋತ್ತರರು ಮತ್ತು ಪದವಿ ವಿದ್ಯಾರ್ಥಿಗಳು ತೊಡಗಿಕೊಂಡಿದ್ದು, ಹೋಮಿಯೋಪಥಿಯನ್ನು ದೇಶದಾದ್ಯಂತ ಪಸರಿಸಲು ಶ್ರಮಿಸುತ್ತಿದ್ದಾರೆ ಎಂದರು.
ನ್ಯಾಶನಲ್ ಅಸೆಸ್ಮೆಂಟ್ ಆ್ಯಂಡ್ ಆ್ಯಕ್ರಿಡೆಶನ್ ಕೌನ್ಸಿಲ್ನಿಂದ (NAAC) ‘A’ ಗ್ರೇಡ್ ಮಾನ್ಯತೆಯನ್ನು ಪಡೆದಿರುವ ಏಕೈಕ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಪ್ರಪ್ರಥಮ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯವಾಗಿದೆ ಎಂಬುದು ಒಂದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಪದವಿ ಪ್ರದಾನ ಸಮಾರಂಭದಲ್ಲಿ 73 ಹೋಮಿಯೋಪಥಿ ಪದವಿ ಹಾಗೂ 27 ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸ ಲಿರುವರು. ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ಹಾಗೂ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಘೋಷಿಸುವ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು ಎಂದರು.
ಪ್ರಸಕ್ತ ವರ್ಷದಲ್ಲಿ 6 ಹೋಮಿಯೋಪಥಿ ಪದವಿ ವಿದ್ಯಾರ್ಥಿಗಳು ಹಾಗೂ 6 ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳು ರ್ಯಾಂಕ್ಗಳನ್ನು ಗಳಿಸಿದ್ದಾರೆ. 6 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು 176 ರ್ಯಾಂಕ್ಗಳನ್ನು ಗಳಿಸಿದ್ದಾರೆ ಎಂದು ಅವರು ವಿವರಿಸಿದರು.
ಸಮಾರಂಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿ ಡಾ.ಎಸ್. ಸಚ್ಚಿದಾನಂದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಂಗಳೂರು ಪ್ರಾಂತದ ಧರ್ಮಾಧ್ಯಕ್ಷ ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಅಧ್ಯಕ್ಷ ಅತೀ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ದಾನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ.ಫಾ. ವಿನ್ಸೆಂಟ್ ಸಲ್ದಾನ, ಉಪ ಆಡಳಿತಾಧಿಕಾರಿ ವಂ.ಫಾ.ಸಿಲ್ವೆಸ್ಟರ್ ಲೋಬೊ, ಪ್ರಾಂಶುಪಾಲ ಡಾ.ಶಿವಪ್ರಸಾದ್ ಕೆ., ಉಪಪ್ರಾಂಶುಪಾಲ ಡಾ.ಇ.ಎಸ್.ಜೆ. ಪ್ರಭುಕಿರಣ್, ಉಪ ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ನಾವಡ, ಮೇಟಿರಿಯಾ ಮೆಡಿಕಲ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಾಥ್ ರಾವ್, ಸ್ನಾತಕೋತ್ತರ ಪದವಿ ಶಿಕ್ಷಣ ವಿಭಾಗದ ಸಲಹೆಗಾರ ಡಾ.ಎಂ.ಕೆ. ಕಾಮತ್, ಸ್ನಾತಕೋತ್ತರ ಪದವಿ ಶಿಕ್ಷಣ ವಿಭಾಗದ ಸಂಯೋಜಕಿ ಡಾ.ಜಸಿಂತಾ ಮೊಂತೆರೊ, ಪದವಿ ಪ್ರದಾನ ಸಮಾರಂಭದ ಸಂಯೋಜಕಿ ಡಾ.ವಿಲ್ಮ ಡಿಸೋಜ ಉಪಸ್ಥಿತರಿದ್ದರು.
‘400 ಕೇಂದ್ರಗಳಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ಸೇವೆ’
ರಾಜ್ಯ ಸರಕಾರದ ಆಯುಷ್ ಯೋಜನೆ ಮೂಲಕ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮತ್ತು ಆರೋಗ್ಯವನ್ನು ವರ್ಧಿಸಲು ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆ ಮೂಲಕ ಅಂಗನವಾಡಿ ಮತ್ತು ಸರಕಾರಿ ಶಾಲೆಗಳು ಸೇರಿದಂತೆ 400 ಕೇಂದ್ರಗಳಲ್ಲಿ ಸೇವೆ ನೀಡಲಾಗುತ್ತಿದೆ ಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ನಿರ್ದೇಶಕ ವಂ.ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ತಿಳಿಸಿದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ಶೀಘ್ರದಲ್ಲಿ 50 ಹಾಸಿಗೆಗಳ ಆಯುಷ್ ಆಸ್ಪತ್ರೆ ಆರಂಭವಾಗಲಿದ್ದು, ಅಲ್ಲಿಯೂ ಹೋಮಿಯೋಪಥಿ ಆಸ್ಪತ್ರೆಯಿಂದ ಸೇವೆ ನೀಡಲಾಗುವುದು. ದೇಶ ಮತ್ತು ವಿದೇಶದಲ್ಲಿ ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ. ರಾಜ್ಯದಲ್ಲಿ 13 ಸಾವಿರ ಹೋಮೊಯೋಪಥಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲಿ 13 ಹೋಮೊಯೋಪಥಿ ಕಾಲೇಜುಗಳಿದ್ದು, ರಾಷ್ಟ್ರ ಮಟ್ಟದಲ್ಲಿ 900 ಕಾಲೇಜುಗಳಿವೆ ಎಂದು ತಿಳಿಸಿದರು.
ಹೋಮಿಯೋಪಥಿ ಸಂಶೋಧನೆಗೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ಕರ್ನಾಟಕದ ಪ್ರತೀ ತಾಲೂಕಿನಲ್ಲಿ 31 ಸೆಂಟರ್ಗಳನ್ನು ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಅದರಂತೆ ಉಗಾಂಡ ರಾಷ್ಟ್ರದಲ್ಲೂ ಹೋಮಿಯೋಪಥಿ ಕಾಲೇಜೊಂದನ್ನು ಆರಂಭಿಸಲು ತೀರ್ಮಾನಿಸಿದ್ದಾರೆ ಎಂದು ಅವರು ವಿವರಿಸಿದರು.