ಅಭ್ಯರ್ಥಿಯ ಚುನಾವಣಾ ವೆಚ್ಚ ಕ್ರಮಬದ್ಧವಾಗಿರಲಿ: ಸುದಿಪ್ತ ಗುಹಾ
ಮಂಗಳೂರು, ಎ.2: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ವೆಚ್ಚ ಕ್ರಮಬದ್ಧವಾಗಿರಬೇಕು ಎಂದು ಲೋಕಸಭಾ ಚುನಾವಣಾ ವೆಚ್ಚ ವೀಕ್ಷಕ ಸುದಿಪ್ತ ಗುಹಾ ಅಭ್ಯರ್ಥಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯಲ್ಲಿನ 12 ರಾಜಕೀಯ ಪಕ್ಷಗಳ ಖರ್ಚು ವೆಚ್ಚಗಳ ಪರಿಶೀಲನೆ ನಡೆಸಿದರು. ಆನಂತರ, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಹಾಗೂ ಪಕ್ಷದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪರಿಶೀಲನೆ ಸಂದರ್ಭದಲ್ಲಿ ಖರ್ಚುವೆಚ್ಚ ಮಾಡುವ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಬಂಧಪಟ್ಟವರಿಗೆ ನೀಡಿದ ಅವರು, ಚುನಾವಣಾ ಆಯೋಗ ಹಲವು ಹಂತಗಳಲ್ಲಿ ವಿವಿಧ ಅಧಿಕಾರಿಗಳ ಮೂಲಕ ಖರ್ಚುವೆಚ್ಚದ ಬಗ್ಗೆ ಎಲ್ಲರ ಮೇಲೆ ನಿಗಾವಹಿಸುತ್ತಿದೆ ಎಂದರು.
ಬಹುಮಾಧ್ಯಮ ಪ್ರಚಾರ ವೇಳೆ ಅಭ್ಯರ್ಥಿಗಳು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಪ್ರಚಾರ ಸಾಮಗ್ರಿಗಳಿಗೆ ಕಡ್ಡಾಯವಾಗಿ ಮಾಧ್ಯಮ ಪ್ರಮಾಣೀಕರಣ ಹಾಗೂ ಪರಿಶೀಲನಾ ಸಮಿತಿಯ ನೋಡಲ್ ಅಧಿಕಾರಿಗಳಿಂದ ಪ್ರಮಾಣಪತ್ರ ಪಡೆದು ಖರ್ಚು ವೆಚ್ಚಗಳ ವಿವರಗಳನ್ನು ನೀಡಬೇಕು ಎಂದು ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ತಿಳಿಸಿದರು.
ಅಭ್ಯರ್ಥಿಗಳಿಗೆ ಖರ್ಚುವೆಚ್ಚ ಸಂಬಂಧ ಇರುವ ಹಲವು ಸಂದೇಹಗಳಿಗೆ ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣಾ ವೆಚ್ಚ ವೀಕ್ಷಕರು ಉತ್ತರ ನೀಡಿದರು. ಚುನಾವಣಾ ವೀಕ್ಷಕ ರಾಜೀವ ರತನ್ ಹಾಗೂ ದ.ಕ. ಜಿಪಂ ಸಿಇಒ ಹಾಗೂ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಖರ್ಚುವೆಚ್ಚದ ನೋಡಲ್ ಅಧಿಕಾರಿ ಡಾ.ಸೆಲ್ವಮಣಿ ಆರ್. ಇದ್ದರು.
1950ಕ್ಕೆ 2,365 ಕರೆಗಳು
ದ.ಕ. ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಈವರೆಗೆ ಕಂಟ್ರೋಲ್ ರೂಂ 1950ಕ್ಕೆ ಒಟ್ಟು 2,365 ಕರೆಗಳನ್ನು ಬಂದಿವೆ. ಜಿಲ್ಲೆಯ ವಿವಿಧೆಡೆಯಿಂದ ಚುನಾವಣೆ ಸಂಬಂಧ ಮಾಹಿತಿ ತಮ್ಮ ಹೆಸರು, ವಾರ್ಡ್ ಹಾಗೂ ಎಪಿಕ್ ಕಾರ್ಡ್ಗಳ ಬಗ್ಗೆ ವಿಚಾರಿಸಲು ಹಾಗೂ ಹೆಸರು ಸೇರಿಸಲು ಒಟ್ಟು 2,240 ಕರೆಗಳನ್ನು ಸ್ವೀಕರಿಸಿ ಮಾಹಿತಿ ನೀಡಲಾಗಿದೆ. ಅಲ್ಲದೆ, ದೂರುಗಳಿಗೆ ಸಂಬಂಧಿಸಿದಂತೆ 125 ಕರೆಗಳನ್ನು ಸ್ವೀಕರಿಸಲಾಗಿದೆ.
‘ಸಿ-ವಿಜಿಲ್’ಗೆ ಸಂಬಂಧಿಸಿದಂತೆ ಒಟ್ಟು 28 ದೂರುಗಳನ್ನು ಸ್ವೀಕರಿಸಲಾಗಿದ್ದು, ದೂರುಗಳನ್ನು ಪರಿಶೀಲಿಸಿದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.