ಸಿಂಗಾಪುರ ಶಿಪ್ಗೆ ಮೀನುಗಾರಿಕಾ ಬೋಟ್ ಢಿಕ್ಕಿ: ಮೀನುಗಾರರು ಪ್ರಾಣಾಪಾಯದಿಂದ ಪಾರು
ಮಂಗಳೂರು, ಎ.2: ಸಿಂಗಾಪುರದಿಂದ ಕೊಲಂಬೋಗೆ ಸರಕು ಹೊತ್ತು ಸಾಗುತ್ತಿದ್ದ ಶಿಪ್ಗೆ ಮೀನುಗಾರಿಕಾ ಬೋಟ್ವೊಂದು ಢಿಕ್ಕಿ ಹೊಡೆದು ಜಖಂಗೊಂಡಿದೆ. ಘಟನೆಯಲ್ಲಿ ಒಂಬತ್ತು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗ್ರೆ ನಿವಾಸಿ ಶ್ರೀನಿವಾಸ್ ಸಾಲ್ಯಾನ್ ಎಂಬವರಿಗೆ ಸೇರಿದ ‘ಜಲ ಪದ್ಮಾವತಿ-2’ ಮೀನುಗಾರಿಕಾ ಬೋಟ್ ಜಖಂಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ನವಮಂಗಳೂರು ಬಂದರು ಬ್ರೇಕ್ ವಾಟರ್ನಿಂದ ಮಾರ್ಚ್ 29ರಂದು ರಾತ್ರಿ 12:20ರಿಂದ 1 ಗಂಟೆ ಮಧ್ಯದಲ್ಲಿ ‘ಜಲ ಪದ್ಮಾವತಿ-2’ ಮೀನುಗಾರಿಕಾ ಬೋಟ್ ಮೀನುಗಾರಿಕೆಗೆಂದು ತೆರಳಿದೆ. ಈ ಬೋಟ್ ಸುಮಾರು 20 ಮೈಲು ಸಮುದ್ರ ದೂರ ತಲುಪುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಸಿಂಗಾಪೂರ್ ದೇಶಕ್ಕೆ ಸೇರಿದ 'MV Chenaya Naree' ಹೆಸರಿನ ಶಿಪ್ ಸರಕು ಹೊತ್ತು ಸಿಂಗಾಪುರದಿಂದ ಕೊಲಂಬೋಗೆ ಹೊರಟಿತ್ತು. ಈ ವೇಳೆ ಬೆಂಗ್ರೆಯ ಮೀನುಗಾರಿಕಾ ಬೋಟ್ ಶಿಪ್ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೋಟ್ ಬಹುತೇಕ ಜಖಂಗೊಂಡಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಮೀನುಗಾರಿಕಾ ಬೋಟ್ನಲ್ಲಿದ್ದ ಒಂಬತ್ತು ಮೀನುಗಾರರು ಪ್ರಾಪಾಯದಿಂದ ಪಾರಾಗಿದ್ದಾರೆ.
‘ಹಡಗುಗಳಲ್ಲಿ ಎಐಎಸ್ (ಸ್ವಯಂಚಾಲಿತ ಗುರುತಿಸುವಿಕೆ ವ್ಯವಸ್ಥೆ) ಸಿಸ್ಟಮ್ನ್ನು ಅಳವಡಿಸಿಕೊಂಡರೆ ಸಮುದ್ರದಲ್ಲಿ ಹಡಗುಗಳ ಮಧ್ಯೆ ಅನಾಹುತಗಳು ಸಂಭವಿಸುವುದನ್ನು ತಪ್ಪಿಸಲು ಸಾಧ್ಯ. ಬೋಟ್ಗಳ ಎರಡೂ ಬದಿಗೆ ನ್ಯಾವಿಗೇಶನ್ ಲೈಟ್ಗಳನ್ನು ಅಳವಡಿಸಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಸಿಎಸ್ಪಿ ಕಂಟ್ರೋಲ್ ರೂಂ 1093ನ್ನು ಸಂಪರ್ಕಿಸಬಹುದು’ ಎಂದು ಮಲ್ಪೆಯ ಕರಾವಳಿ ಭದ್ರತಾ ಪಡೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.