ಅಕ್ರಮ ಹವಳ ಸಾಗಾಟ ಪತ್ತೆ: ಓರ್ವನ ಬಂಧನ
ಮಂಗಳೂರು: ಅಕ್ರಮವಾಗಿ ಹವಳ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿ ಸುಮಾರು ಐದು ಲಕ್ಷ ರೂ. ಮೌಲ್ಯದ ಹವಳಗಳನ್ನು ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ಸ್ವಾಧೀನಪಡಿಸಿದ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹರಪ್ಪನ ತಾಲೂಕಿನ ಕಡತಿ ಹೋಬಳಿ ಖಂಡಕೇರಿ ತಾಂಡ ನಿವಾಸಿ ಜಯಸಿಂಗ್ (29) ಬಂಧಿತ ಆರೋಪಿ. ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಚಿಕ್ಕಮಂಗಳೂರು ಜಿಲ್ಲೆಯ ಇಂದಿರಾ ಗಾಂಧಿ ರಸ್ತೆಯ ಬೋಳರಾಮೇಶ್ವರ ದೇವಸ್ಥಾನದ ಹತ್ತಿರದ ಹೋಟೆಲ್ನಲ್ಲಿ ಅಕ್ರಮವಾಗಿ ಸಮುದ್ರದ ಹವಳಗಳನ್ನು ಇಟ್ಟಿರುವುದನ್ನು ಪತ್ತೆ ಮಾಡಿ, ಅವುಗಳನ್ನು ಸ್ವಾಧೀನ ಪಡಿಸಿಕೊಂಡು ಆರೋಪಿ ಜಯಸಿಂಗ್ ನನ್ನು ಬಂಧಿಸಿದ್ದಾರೆ.
ಆರೋಪಿ ಮತ್ತು ಸೊತ್ತುಗಳನ್ನು ಮುಂದಿನ ತನಿಖೆಯ ಬಗ್ಗೆ ಆರ್.ಎಫ್.ಒ. ಚಿಕ್ಕಮಂಗಳೂರು ವಲಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪ್ರಭಾಕರ ಬಾರ್ಕಿ ಅವರ ಆದೇಶದಂತೆ ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸು ಉಪ ನಿರೀಕ್ಷಕರಾದ ಮಾಧವ ಕೂಡ್ಲು ಹಾಗು ಸಿಬ್ಬಂದಿಗಳಾದ ಜಗನ್ನಾಥ ಶೆಟ್ಟಿ, ಪ್ರವೀಣ, ಉದಯ ನಾಯ್ಕ ಎನ್, ಮಹೇಶ, ದೇವರಾಜ್ ಹಾಗೂ ಸುಂದರ ಶೆಟ್ಟಿ ಪಾಲ್ಗೊಂಡಿರುತ್ತಾರೆ.