ಮೋದಿ ಚಿತ್ರವಿರುವ ಸೀರೆ ಮಾರಾಟ: ಉದ್ಯಾವರ ಜಯಲಕ್ಷ್ಮಿ ಮಳಿಗೆಗೆ ಚು.ಆಯೋಗ ದಾಳಿ
► ಕರ್ತವ್ಯಕ್ಕೆ ಅಡ್ಡಿ ಆರೋಪ ► ಮುಂದುವರೆದ ಶೋಧ
ಉಡುಪಿ, ಎ.3: ಉದ್ಯಾವರ ಜಯಲಕ್ಷ್ಮೀ ಸಿಲ್ಕ್ ಆ್ಯಂಡ್ ಸಾರೀಸ್ನಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಸೀರೆಗಳನ್ನು ಮಾರಾಟ ಮಾಡುತ್ತಿರುವ ಕುರಿತ ದೂರಿನಂತೆ ಎ. 2ರಂದು ಸಂಜೆ ವೇಳೆ ಪರಿಶೀಲನೆಗೆ ತೆರಳಿದ ಚುನಾವಣಾಧಿಕಾರಿಗಳ ಕರ್ತವ್ಯಕ್ಕೆ ಮಾಲಕರು ಅಡ್ಡಿ ಪಡಿಸಿದ್ದು, ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಸೀರೆಗಳ ಶೋಧ ಕಾರ್ಯವನ್ನು ಇಂದು ಕೂಡ ಮುಂದುವರೆಸಲಾಗಿದೆ.
ಜಯಲಕ್ಷ್ಮೀಯಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಸೀರೆ ಗಳನ್ನು ಉಚಿತವಾಗಿ ವಿತರಿಸುತ್ತಿರುವ ಕುರಿತ ಮಾಹಿತಿಯಂತೆ ಕಾಪು ಕ್ಷೇತ್ರ ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಡುಪಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್, ಕಾಪು ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ನ ಅಧಿಕಾರಿ ನಾಗರಾಜ್ ಜೊತೆ ಜಯಲಕ್ಷ್ಮೀಗೆ ತೆರಳಿ ಮಾಲಕರಾದ ರವೀಂದ್ರ ಹೆಗ್ಡೆ ಹಾಗೂ ವಿರೇಂದ್ರ ಹೆಗ್ಡೆ ಅವರಲ್ಲಿ ಈ ಬಗ್ಗೆ ವಿಚಾರಿಸಿ, ಸ್ಟಾಕ್ ತೋರಿಸುವಂತೆ ಸೂಚಿಸಿದರು.
ಈ ಹಿಂದೆ ಜಿಲ್ಲಾಧಿಕಾರಿಯವರಲ್ಲಿ ಕೂಡ ದೂರು ದಾಖಲಾಗಿದ್ದು ಯಾವುದೇ ಬಗೆಯ ಸ್ಟಾಕ್ನ್ನು ಚುನಾವಣಾ ಸಮಯದಲ್ಲಿ ರಿಯಾಯಿತಿ ಮಾರಾಟ ಮಾಡುವುದು ಹಾಗೂ ಉಚಿತವಾಗಿ ನೀಡುವುದು ನೀತಿ ಸಂಹಿತ ಉಲ್ಲಂಘನೆ ಎಂದು ಅಧಿಕಾರಿಗಳು ಮಾಲಕರಿಗೆ ತಿಳಿಸಿದರು. ಈ ವೇಳೆ ಮಾಲಕರಿಬ್ಬರು ‘ನಿನ್ನಲ್ಲಿ ಸರ್ಚ್ ವಾರಂಟ್ ಇದೇಯಾ ನೀನು ಏಕೆ ಬಂದ್ದಿದಿಯಾ ಎಂದು ಪ್ರಶ್ನಿಸಿ, ಸ್ಟಾಕ್ ವಿವರ ನೀಡಿರುವುದಿಲ್ಲ’ ಎಂದು ಗದರಿಸಿದರೆಂದು ದೂರಲಾಗಿದೆ.
ಅಲ್ಲದೆ ಅನಿತಾ ಭಾಸ್ಕರ್ರನ್ನು ಉದ್ದೇಶಿಸಿ ಏಕವಚನದಲ್ಲಿ ಮಾತನಾಡಿ, ಲಂಚ ಪಡೆಯಲು ಬಂದ್ದಿದಿಯಾ ಎಂದು ಸುಳ್ಳು ಆರೋಪ ಮಾಡಿ, ಒಬ್ಬ ಮಹಿಳಾ ಅಧಿಕಾರಿಯನ್ನು ಬೆದರಿಸಿ ಹಿಯಾಳಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಅನಿತಾ ಭಾಸ್ಕರ್ ನೀಡಿದ ದೂರಿನಂತೆ ಮಾಲಕರಿಬ್ಬರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ
ಈ ಹಿಂದೆ ಜಯಲಕ್ಷ್ಮೀ ಅಂಗಡಿ ಮಾಲಕ ರಿಗೆ ಉಡುಪಿ ವಾಣಿಜ್ಯ ತೆರಿಗೆ ಅಧಿಕಾರಿ ಹಾಗೂ ಉಡುಪಿ ತಹಶೀಲ್ದಾರರು ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಚುನಾವಣಾ ನೀತಿ ಸಂಹಿತೆಗೆ ಧಕ್ಕೆಯಾಗುವಂತಹ ಯಾವುದೇ ವಸ್ತುಗಳನ್ನು ಮಾರಾಟ ಮಾಡದಂತೆ ಸೂಚನೆ ಗಳನ್ನು ನೀಡಿದ್ದರು.
ಆದರೂ ಅಂಗಡಿ ಮಾಲಕರು ಮಾ.13ರಂದು ಮೋದಿ ಭಾವಚಿತ್ರ ಇರುವ ಎರಡು ಸಾರಿಗಳನ್ನು ಮಾರಾಟ ಮಾಡಿರುವ ಬಗ್ಗೆ ಅಧಿಕೃತ ಮಾಹಿತಿ ಕಾಪು ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ನ ಅಧಿಕಾರಿ ನಾಗರಾಜ್ ದೊರೆತಿತ್ತು. ಅದರಂತೆ ಎ. 2ರಂದು ಸಂಜೆ 6 ಗಂಟೆಗೆ ನಾಗರಾಜ್ ಮೋದಿ ಭಾವಚಿತ್ರ ಇರುವ ಸೀರೆ ಗಳ ಸ್ಟಾಕ್ ಬಗ್ಗೆ ಅಂಗಡಿ ಮಾಲಕರಿಬ್ಬರಲ್ಲಿ ವಿಚಾರಿಸಿದರು. ಆದರೆ ಅವರು ಸ್ಟಾಕ್ ತೋರಿಸಲು ನಿರಾಕರಿಸಿದರೆನ್ನಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಸಮಯದಲ್ಲಿ ಜಯಲಕ್ಷ್ಮೀ ಮಾಲಕರಾದ ರವೀಂದ್ರ ಹಾಗೂ ವೀರೇಂದ್ರ ತಮ್ಮ ಅಂಗಡಿಯಲ್ಲಿ ಮೋದಿ ಭಾವಚಿತ್ರ ಇರುವ ಸೀರೆಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ನಾಗರಾಜ್ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಧಿಕಾರಿಗಳಿಗೆ ಪರಿಶೀಲನೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ನೇತೃತ್ವದಲ್ಲಿ ಪೊಲೀಸ್ ಪಡೆಯನ್ನು ಉದ್ಯಾವರಕ್ಕೆ ಕರೆಸಲಾಯಿತು. ಬಳಿಕ ರಾತ್ರಿ ವೇಳೆ ಬಿಗಿ ಭದ್ರತೆಯಲ್ಲಿ ಅಧಿಕಾರಿಗಳು ಸೀರೆಗಾಗಿ ಹುಡುಕಾಟ ನಡೆಸಿದ್ದಾರೆ. ಇದೀಗ ಇಂದು ಕೂಡ ಪೊಲೀಸ್ ಭದ್ರತೆಯಲ್ಲಿ ಮೋದಿ ಭಾವಚಿತ್ರ ಇರುವ ಸೀರೆಗಾಗಿ ಶೋಧ ಕಾರ್ಯವನ್ನು ಮುಂದುವರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.