ವಿಜಯಾ ಬ್ಯಾಂಕ್ ವಿಲೀನಕ್ಕೆ ನಳಿನ್ ಕುಮಾರ್ ಕಟೀಲ್ ಕಾರಣ: ಮಹಾಬಲ ಮಾರ್ಲ
ಮಂಗಳೂರು, ಎ. 3: ದ.ಕ.ಜಿಲ್ಲೆಯ ಜನತೆಯ ಶ್ರಮದ ಫಲವಾಗಿ ಜನ್ಮತಾಳಿದ ವಿಜಯಾ ಬ್ಯಾಂಕ್ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳ್ಳಲು ಸಂಸದ ಹಾಗೂ ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕಾರಣ ಎಂದು ಮಾಜಿ ಮೇಯರ್ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಾಬಲ ಮಾರ್ಲ ಹೇಳಿದ್ದಾರೆ.
ನಗರದ ಬೆಂದೂರ್ವೆಲ್ ಬಳಿಕ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಮಹಾಬಲ ಮಾರ್ಲ, ಸಂಸದ ನಳಿನ್ ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ ವಿಜಯಾ ಬ್ಯಾಂಕ್ ವಿಲೀನಕ್ಕೆ ಕಾಂಗ್ರೆಸ್ ನಾಯಕರಾದ ವೀರಪ್ಪ ಮೊಯ್ಲಿ ಮತ್ತು ಚಿದಂಬರಂ ಅವರೇ ಕಾರಣ ಎಂದು ಆಪಾದಿಸಿ ದ್ದಾರೆ. ತನ್ನ ವೈಫಲ್ಯವನ್ನು ಮರೆಮಾಚಲು ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಹೊರಿಸಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ ಎಂದರು.
ಕೇಂದ್ರ ಸರಕಾರವು ಕಳೆದ ಮೂರು ವರ್ಷದಿಂದ ಯಾವುದೇ ಬ್ಯಾಂಕ್ಗಳ ಮಂಡಳಿಗೆ ಅಧಿಕಾರಿಗಳ ಮತ್ತು ನೌಕರರ ಪ್ರತಿನಿಧಿಯಾಗಿ ಯಾರನ್ನೂ ನೇಮಿಸಿಲ್ಲ. ಸರಕಾರದ ಅಕ್ರಮಗಳು, ಬಂಡವಾಳ ಶಾಹಿಗಳಿಗೆ ಕಾನೂನು ಬಾಹಿರವಾಗಿ ಬ್ಯಾಂಕ್ ಸವಲತ್ತುಗಳನ್ನು ನೀಡುವುದನ್ನು ಪ್ರಶ್ನಿಸಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ವಿಜಯಾ ಬ್ಯಾಂಕ್ ಕೈ ತಪ್ಪುತ್ತದೆ ಎಂಬುದು ನಳಿನ್ಗೆ ಮೊದಲೇ ಗೊತ್ತಿತ್ತು. ಇದರ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಮನವರಿಕೆಯಾದಾಗ ದ.ಕ.ಜಿಲ್ಲೆಯ ಸರ್ವ ಪಕ್ಷಗಳ ಪ್ರತಿನಿಧಿಗಳ, ಪ್ರಮುಖರ ಸಭೆ ಕರೆದು ಅಭಿಪ್ರಾಯ ಪಡೆದು ಮುಂದಿನ ಹೋರಾಟಕ್ಕೆ ಅಣಿಯಾಗಬಹುದಿತ್ತು. ಆದರೆ, ನಳಿನ್ ತನ್ನ ಲೋಕಸಭಾ ಅಭ್ಯರ್ಥಿತನವನ್ನು ಉಳಿಸುವ ಸಲುವಾಗಿ ಹೈಕಮಾಂಡ್ ವಿರುದ್ಧ ಧ್ವನಿ ಎತ್ತದೆ ಸುಮ್ಮನಾಗಿದ್ದಾರೆ. ಅದನ್ನು ಮರೆ ಮಾಚಲು ವೀರಪ್ಪ ಮೊಯ್ಲಿ ಮತ್ತು ಚಿದಂಬರಂ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ ಎಂದು ಮಹಾಬಲ ಮಾರ್ಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಟಿ.ಕೆ.ಸುಧೀರ್, ಸ್ಟಾನಿ ಆಲ್ವಾರೀಸ್, ಜೆ. ಅಬ್ದುಲ್ ಸಲೀಂ ಮತ್ತಿತರರಿದ್ದರು.