ಅಂಬಿಗರ ಚೌಡಯ್ಯನ ವಚನಗಳ ಉಪನ್ಯಾಸ ಸ್ಪರ್ಧೆ
ಮಂಗಳೂರು, ಎ. 3: ಮಂಗಳೂರು ವಿಶ್ವವಿದ್ಯಾನಿಲಯದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ವತಿಯಿಂದ ನಗರದ ಹಂಪನಕಟ್ಟೆಯಲ್ಲಿರುವ ವಿವಿ ಕಾಲೇಜಿನಲ್ಲಿ ಬುಧವಾರ ಅಂಬಿಗರ ಚೌಡಯ್ಯನ ವಚನಗಳ ಅಂತರ್ ಕಾಲೇಜು ವಿದ್ಯಾರ್ಥಿ ಉಪನ್ಯಾಸ ಸ್ಪರ್ಧೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿದ್ವಾಂಸ ಪ್ರೊ.ಎ.ವಿ.ನಾವಡ ದಾರ್ಶನಿಕರ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳಲ್ಲಿರುವ ವಿವಿಧ ಪೀಠಗಳಿಂದ ಜ್ಞಾನದ ಪ್ರಸಾರವಾಗುತ್ತಿದೆ. ಸಕಾಲಿಕ ಚಿಂತನೆಗಳನ್ನು ಹುಟ್ಟು ಹಾಕಲು ಇದು ತುಂಬಾ ಸಹಕಾರಿಯಾಗಿದೆ ಎಂದರು.
ಜ್ಞಾನದ ಹುಟ್ಟು ಮತ್ತು ಜ್ಞಾನದ ಹಂಚಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕನಕದಾಸರ ಪೀಠ, ಅಂಬಿಗರ ಚೌಡಯ್ಯರ ಪೀಠ, ರತ್ನಾಕರವರ್ಣಿ ಪೀಠ ಹೀಗೆ ವಿವಿಧ ದಾರ್ಶನಿಕರ ಹೆಸರಿನಲ್ಲಿರುವ ಪೀಠಗಳ ಮುಖಾಂತರ ಅತ್ಯುತ್ತಮ ಕೆಲಸಗಳು ನಡೆಯುತ್ತಿರುವುದು ಶ್ಲಾಘನೀಯ. ಅಂಬಿಗರ ಚೌಡಯ್ಯ ಒಬ್ಬ ಅನುಭಾವಿ. ಸಾಮಾಜಿಕ ಬದಲಾವಣೆಯ ಹುಮ್ಮಸ್ಸು, ಹಠ ಆತನಲ್ಲಿತ್ತು. ಆತ ಮಧ್ಯಕಾಲಿಕ ಕರ್ನಾಟಕದಲ್ಲಿದ್ದ ಮೇಲು-ಕೀಳು ಮನೋಭಾವವನ್ನು ಪ್ರಶ್ನಿಸಿದ್ದಲ್ಲದೆ ಅಂಧಶ್ರದ್ಧೆ, ವೌಢ್ಯಗಳಿಂದ ಹೊರ ಬರಲು ಪ್ರಯತ್ನಿಸಿದ್ದ. ಅಂಬಿಗರ ಚೌಡಯ್ಯನ ಒಟ್ಟು ಆಶಯ ಏನು, ಅವನು ಸಾಮಾಜಿಕ ಪರಿವರ್ತನೆಗೆ ಹರಿಕಾರನಾದ ಬಗ್ಗೆ ಅರಿಯುವ ಅಗತ್ಯ ಇದೆ ಎಂದು ಡಾ.ಎ.ವಿ.ನಾವಡ ಹೇಳಿದರು.
ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ. ಕಿಶೋರಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯೆ ಡಾ.ಯು. ತಾರಾ ರಾವ್ ಭಾಗವಹಿಸಿದ್ದರು.
ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯಕುಮಾರ್ ಇರ್ವತ್ತೂರು ಎಂ.ಎ. ಸ್ವಾಗತಿಸಿದರು. ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ. ನಾಗಪ್ಪ ಗೌಡ ಆರ್. ಪ್ರಸ್ತಾವನೆಗೈದರು. ವಿವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ವಂದಿಸಿದರು. ಮಂಗಳೂರು ವಿವಿ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಶಿವರಾಜು ಕಾರ್ಯಕ್ರಮ ನಿರೂಪಿಸಿದರು.