ರಾಜಕೀಯವಲ್ಲ, ಪ್ರಜಾಕೀಯ: ಉಪೇಂದ್ರ
ಮಂಗಳೂರು, ಎ.3: ಬದಲಾವಣೆ ಆಗಬೇಕಾದರೆ ಪ್ರಯತ್ನಗಳು ಅತ್ಯಗತ್ಯ. ಆ ನಿಟ್ಟಿನಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಜಾಕೀಯವು ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಈಗಾಗಲೇ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಮುಖ್ಯಸ್ಥ, ನಟ ಉಪೇಂದ್ರ ಹೇಳಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮದು ರಾಜಕೀಯವಲ್ಲ. ನಮ್ಮದು ಪ್ರಜಾಕೀಯ. ವ್ಯಾಪಾರಿ ರಾಜಕಾರಣದಿಂದ ಪ್ರಜಾಕಾರಣದತ್ತ ಪ್ರಜಾಪ್ರಭುತ್ವಕ್ಕೊಂದು ಹೊಸ ಆಯಾಮ ನೀಡುವ ಉದ್ದೇಶದಿಂದ ಇದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡದಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ವಿಜಯ್ ಶ್ರೀನಿವಾಸ್ ಅವರು ಸ್ಪರ್ಧಿಸುತ್ತಿದ್ದಾರೆ. ಪ್ರಚಾರದ ವೇಳೆ ಕರಪತ್ರಗಳನ್ನು ನೀಡಿ ಜನರಿಂದ ಅವರ ಬೇಡಿಕೆಗಳನ್ನು ಸಂಗ್ರಹಿಸಲಾಗುವುದು. ಅದನ್ನು ಮುಂದೆ ಆಡಳಿತ ವರ್ಗದ ಮುಂದಿಟ್ಟು ಚರ್ಚಿಸಿ ಸಿದ್ಧಪಡಿಸಿದ ಯೋಜನೆಗಳನ್ನು ಜನತೆಯ ಮುಂದಿಡುತ್ತೇವೆ ಎಂದು ಅವರು ಹೇಳಿದರು.
ಆಯ್ಕೆ, ಚುನಾವಣೆ, ನಿರಾಕರಣೆ ಎಲ್ಲವೂ ಜನರಿಂದ ಆಗಬೇಕು. ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಉದ್ದೇಶದಿಂದ ಶೇ. 100ರಷ್ಟು ಪಾರದರ್ಶಕ ಆಡಳಿತವನ್ನು ಒದಗಿಸುವ ಉದ್ದೇಶದಿಂದ ಚುನಾವಣೆಯನ್ನು ಎದುರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಣಾಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಪ್ರಣಾಳಿಕೆ ಎಂಬುದೇ ಒಂದು ದೃಢತೆ ಇಲ್ಲದಿರುವಂತದ್ದು. ನನ್ನ ಪ್ರಕಾರ ಪ್ರಣಾಳಿಕೆ ನ್ಯಾಯಾಲಯದಲ್ಲಿ ನೋಂದಣಿಯಾಗಿ ಅದಕ್ಕೆ ಬದ್ಧವಾಗಿ ನಡೆದುಕೊಳ್ಳುವ ವ್ಯವಸ್ಥೆಯು ಸಂವಿಧಾನದ ಮೂಲಕ ತಿದ್ದುಪಡಿಯಾಗಬೇಕು. ಪ್ರಣಾಳಿಕೆ ಸುಳ್ಳು ಭರವಸೆಗಳನ್ನು ನೀಡುವಂತಾಗಬಾರದು. 2 ಲಕ್ಷ ಕೋಟಿ ಗಾತ್ರದ ಬಜೆಟ್ಗೆ 5 ಲಕ್ಷ ಕೋಟಿ ರೂ. ಗಾತ್ರದ ಪ್ರಣಾಳಿಕೆ ನೀಡಿದಾಗ ಅದನ್ನು ಈಡೇರಿಸಲು ಸಾಧ್ಯವೇ? ಈ ಬಗ್ಗೆ ಜನ ಆಲೋಚನೆ ಮಾಡುವ ಕಾಲ ಬರಬೇಕು. ಅದಕ್ಕಾಗಿಯೇ ಪ್ರಜಾಕೀಯದ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಾರ್ಕಿಕ ಉತ್ತರ ನೀಡಿದರು.
ಪ್ರಜಾಕೀಯದ ಆದರ್ಶಗಳನ್ನು ಈಡೇರಿಸಲು ಮಹಾಘಟ್ಬಂಧನ್ನಂತಹ ಪ್ರಕ್ರಿಯೆಗೆ ಮುಂದಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ನಮ್ಮ ಮಹಾಘಟ್ಬಂಧನ್ ಜನರ ಜತೆ. ಅದು ಆದಾಗ ಪ್ರಜೆಗಳಿಗೆ ಹಕ್ಕು ಸಿಗಲಿದೆ. ಪ್ರಜೆಳಿಗೆ ಅಧಿಕಾರ ದೊರೆಯಲಿದೆ ಎಂದರು.
ಈಗಾಗಲೇ ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವೂ ಪ್ರಯತ್ನಿಸಿದೆಯಲ್ಲಾ ಎಂದು ಕೇಳಿದರೆ, ಅದು ದೆಹಲಿಯಲ್ಲಿ ಬಲಿಷ್ಟವಾಗಿದೆ. ಆದರೆ ನಾವು ಮತ್ತೊಂದು ರಾಜಕೀಯ ಪಕ್ಷವಾಗಿ ಬಂದಿಲ್ಲ. ನಮ್ಮಲ್ಲಿ ಹೈಕಮಾಂಡ್ ಇಲ್ಲ. ಪ್ರಸ್ತುತ ರಾಜರ ಕೈಯಲ್ಲಿರುವ ಅಧಿಕಾರವನ್ನು ಪ್ರಜೆಗಳಿಗೆ ನೀಡುವ ಪ್ರಯತ್ನ ನಮ್ಮದು ಎಂದು ಮಾರ್ಮಿಕವಾಗಿ ನುಡಿದರು.
ಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ವಿಜಯ್ ಶ್ರೀನಿವಾಸ್ ಉಪಸ್ಥಿತರಿದ್ದರು.