ನೀರು ಕೊಡದವರು ವೋಟು ಕೇಳಲು ಬರಬೇಡಿ: ಕುಂಬ್ರ ದಲಿತ ಕಾಲನಿ ನಿವಾಸಿಗಳಿಂದ ಮತದಾನ ಬಹಿಷ್ಕಾರ
ಪುತ್ತೂರು: ಎರಡು ತಿಂಗಳಿನಿಂದ ಕುಡಿಯುವ ನೀರಿಲ್ಲದೆ ನಾವು ಸಂಕಷ್ಟದಲ್ಲಿದ್ದೇವೆ, ನಮ್ಮ ಕಷ್ಟವನ್ನು ಕೇಳಲು ಯಾರೂ ಬಂದಿಲ್ಲ. ನಾವು ವೋಟು ಯಾರಿಗೂ ಹಾಕುವುದಿಲ್ಲ. ಮೊದಲು ನೀರಿನ ವ್ಯವಸ್ಥೆ ಮಾಡಿ ಆಮೇಲೆ ವೋಟು ಕೇಳಲು ಬನ್ನಿ ಇಲ್ಲವಾದರೆ ವೋಟು ಕೇಳಲು ನಮ್ಮ ಕಾಲನಿಗೆ ಬರಬೇಡಿ ಎಂದು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಬಿಜಲ ದಲಿತ ಕಾಲನಿ ನಿವಾಸಿಗಳು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕಾಲನಿಯಲ್ಲಿ 50 ಮನೆಗಳಿವೆ. ಇಲ್ಲಿಗೆ ಗ್ರಾಪಂ ನೀರೇ ಆಶ್ರಯವಾಗಿದೆ. ಆದರೆ ನೀರು ಪೂರೈಕೆಯ ಕೇಂದ್ರವಾಗಿದ್ದ ಕೊಳವೆ ಬಾವಿ ಬತ್ತಿ ಹೋಗಿ ಎರಡು ತಿಂಗಳಾಗಿದೆ. ಆ ಬಳಿಕ ಕಾಲನಿಗೆ ನೀರು ಬಂದಿಲ್ಲ. ಸಮೀಪದಲ್ಲಿ ಎಲ್ಲೂ ನೀರಿನ ಆಶ್ರಯವಿಲ್ಲ. ಇರುವ ಹ್ಯಾಂಡ್ ಬೋರ್ ಕೂಡಾ ಕೆಟ್ಟು ಹೋಗಿದೆ ಅದನ್ನೂ ದುರಸ್ಥಿ ಮಾಡಿಲ್ಲ. ಗ್ರಾಪಂಗೆ ಮನವಿ ಮಾಡಿ ಸಾಕಾಗಿ ಹೋಗಿದೆ. ಪಿಡಿಒ ಅವರು ಕಾಲನಿಗೆ ಬಂದು ಪರಿಶೀಲನೆ ಮಾಡಿಲ್ಲ. ಯಾವುದೇ ರಾಜಕೀಯ ಪ್ರತಿನಿಧಿಗಳು ಬಂದು ನಮ್ಮ ಕಷ್ಟ ಕೇಳಲಿಲ್ಲ ಎಂದು ಕಾಲನಿ ನಿವಾಸಿಗಳು ಆರೋಪಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯನ್ನು ನಾವು ಬಹಿಷ್ಕಾರ ಮಾಡುತ್ತೇವೆ. ನಮ್ಮ ಕಾಲನಿಯಲ್ಲಿ 200 ಮತಗಳಿವೆ. ವೋಟು ಕೇಳಲು ಬರುವವರು ನಮ್ಮ ಕಾಲನಿಯ ಪರಿಸ್ಥಿತಿಯನ್ನು ತಿಳಿದುಕೊಂಡು ಬನ್ನಿ ಭರವಸೆಯ ಮಾತುಗಳೊಂದಿಗೆ ಬರುವುದೇ ಬೇಡ ಎಂದು ಎಚ್ಚರಿಸಿದ್ದಾರೆ.
ಕಾಲನಿಯಲ್ಲಿ ಎರಡು ತಿಂಗಳಿಂದ ನೀರು ಇಲ್ಲದೇ ಇರುವ ವಿಚಾರ ಗಮನಕ್ಕೆ ಬಂದಿದೆ. ಆದರೆ ಕೊಳವೆ ಬಾವಿ ಬತ್ತಿ ಹೋಗಿದೆ. ಅಲ್ಲಿಗೆಂದೇ ಮೊನ್ನೆ ಹೊಸ ಕೊಳವೆ ಬಾವಿಯನ್ನು ತೆಗೆದಿದ್ದೇವೆ ಅದರಲ್ಲೂ ನೀರು ಸಿಗಲಿಲ್ಲ ತಕ್ಷಣವೇ ಅಲ್ಲಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಗ್ರಾಪಂ ಪಿಡಿಒ ಗೀತಾ ಅವರು ತಿಳಿಸಿದ್ದಾರೆ.