ಉಡುಪಿ: ಮುರಾರಿ-ಕೆದ್ಲಾಯ ರಂಗೋತ್ಸವ
ಉಡುಪಿ, ಎ.3: ನಗರದ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಆಶ್ರಯದಲ್ಲಿ ಎ.6 ಮತ್ತು 7ರಂದು ಪ್ರತಿದಿನ ಸಂಜೆ 7:00ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಮುರಾರಿ- ಕೆದ್ಲಾಯ ರಂಗೋತ್ಸವ ನಡೆಯಲಿದೆ.
ರಂಗೋತ್ಸವನ್ನು ಎ.6ರ ಶನಿವಾರ ಸಂಜೆ 6:15ಕ್ಕೆ ಮಂಗಳೂರಿನ ಪಾದುವ ಕಾಲೇಜಿನ ಪ್ರಾಂಶುಪಾಲರಾದ ವಂ.ಆಲ್ವಿನ್ ಸೆರಾವೋ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ರಥಬೀದಿ ಗೆಳೆಯರು ಸಂಸ್ಥೆಯ ಮಾಜಿ ಕೋಶಾಧಿಕಾರಿ ರಮೇಶ್ ರಾವ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ.ಮುರುಳಿಧರ ಉಪಾಧ್ಯ ಹಿರಿಯಡ್ಕ ವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ಬಳಿಕ ಬೆಂಗಳೂರಿನ ಯುವಶ್ರೀ ಕಲಾವಿದ ರಿಂದ ಸಿಂಹಾಚಲಂ ಸಂಪಿಗೆ (ಮೂಲ: ಶ್ರೀರಮಣ, ಕನ್ನಡಕ್ಕೆ: ವಸುಧೇಂದ್ರ, ರಂಗರೂಪ/ನಿರ್ದೇಶನ:ಶಂಕರ್ಗಣೇಶ್)ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.
ಮರುದಿನ ಎ.7ರ ರವಿವಾರ ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ಮಲಪ್ಪುರಂ ಕಲಾವಿದರಿಂದ ಚಿಲ್ಲರ ಸಮರಂ (ರಚನೆ: ರಾಜೇಶ್, ನಿರ್ದೇಶನ: ಅರುಣ್ಲಾಲ್) ಮಲಯಾಳಿ ನಾಟಕ ಪ್ರದರ್ಶನಗೊಳ್ಳಲಿದೆ. ಈ ಎರಡೂ ವಿಭಿನ್ನ ನಾಟಕಗಳಿಗೆ ರಂಗಾಸಕ್ತರಿಗೆ ಉಚಿತ ಪ್ರವೇಶವಿದೆ ಎಂದು ಸಂಸ್ಥೆಯ ನಾಟಕ ವಿಭಾಗದ ಸಂಚಾಲಕರಾದ ಸಂತೊಷ್ ಶೆಟ್ಟಿ ಹಿರಿಯಡ್ಕ ಮತ್ತು ಸಂತೋಷ್ ನಾಯಕ್ ಪಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.