ಮಕ್ಕಳ ಹಕ್ಕುಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಲು ಆಗ್ರಹ
ಉಡುಪಿ, ಎ.3:ಪಡಿ ಮಂಗಳೂರು ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಸಹಕಾರದೊಂದಿಗೆ ಆರ್ಟಿಇ ಅನುಷ್ಠಾನ ಕುರಿತ ಸಾಧ್ಯತೆಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತ ಎರಡು ದಿನದ ಕಾರ್ಯಗಾರ ಮಣಿಪಾಲದ ಇಂಟರ್ಯಾಕ್ಟ್ ಬಿಲ್ಡಿಂಗ್ನಲ್ಲಿ ನಡೆಯಿತು. ಖ್ಯಾತ ಶಿಕ್ಷಣ ತಜ್ಞರಾದ ಬೆಂಗಳೂರಿನ ಮಗು ಮತ್ತು ಕಾನೂನು ಕೇಂದ್ರದ ಮುಖ್ಯಸ್ಥ ಹಾಗೂ ಫೆಲೋ ಡಾ. ನಿರಂಜನಾರಾಧ್ಯ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಆರ್ಟಿಇ ಕಾಯಿದೆ ಜಾರಿ ಬಂದು ಒಂದು ದಶಕವಾದರೂ ಇನ್ನೂ ನಮ್ಮ ರಾಜ್ಯದಲ್ಲಿ ಕಾಯಿದೆ ಅನುಷ್ಠಾನವಾಗದೇ ಇರುವುದು ರಾಜ್ಯದ ಮಕ್ಕಳ ಒಟ್ಟಾರೆ ಅಭಿವೃದ್ಧಿಗೆ ಮಾರಕ. ಇಂದಿನ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನದ ಪ್ರಕ್ರಿಯೆ ಯನ್ನು ಅವಲೋಕಿಸಿದಾಗ, ಕಾಯಿದೆಯ ಸಮರ್ಪಕ ಅನುಷ್ಠಾನಕ್ಕಾಗಿ ಜನಾಂದೋಲನವೇ ನಡೆಯಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ಪಡಲಾಯಿತು.
ಈ ನಿಟ್ಟಿನಲ್ಲಿ ಶಿಕ್ಷಣ ಹಕ್ಕಿಗಾಗಿ ರಾಜ್ಯಾದ್ಯಂತ ವಿವಿಧ ಸಮಾಜಮುಖಿ ಕ್ಷೇತ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಸಾಮಾಜಿಕ ಅಭಿವೃದ್ದಿಯ ಪ್ರವರ್ತಕ ರೊಂದಿಗೆ ರಾಜ್ಯಾದ್ಯಂತ ವಾಸ್ತವ ಸ್ಥಿತಿಯ ವಿಶ್ಲೇಷಣೆ ನಡೆಸಿದಾಗ ಪ್ರಸಕ್ತ ಆರ್ಟಿಇ ಕಾಯಿದೆಯ ಅನುಷ್ಠಾನ ಸಂವಿಧಾನದ ಆಶಯಕ್ಕೆ ದೂರವಾಗಿ ಉಳಿದಿರುವುದು ಕಂಡುಬಂತು ಎಂದು ಕಾರ್ಯಾಗಾರದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈ ನಿಟ್ಟಿನಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಈ ಕೆಳಗಿನ ಅಂಶಗಳನ್ನು ಕೇಂದ್ರೀಕರಿಸಿ, ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನಕ್ಕೆ ರಾಜಕೀಯ ಪಕ್ಷದ ಮುಖ್ಯಸ್ಥರನ್ನು ಮತ್ತು ಚುನಾವಣಾ ಅ್ಯರ್ಥಿಗಳನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ಇದಕ್ಕಾಗಿ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನ ಸಮನ್ವಯ ಕರ್ನಾಟಕ ವೇದಿಕೆ ಮೂಲಕ ರಾಜ್ಯಾದ್ಯಂತ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಮುಖತಃ ಭೇಟಿ ಮಾಡಿ ಚುನಾವಣೆಯಲ್ಲಿ ಆರಿಸಿ ಬಂದ ಮೇಲೆ ಈ ಕೆಳಕಂಡ ಅಂಶಗಳನ್ನು ಈಡೇರಿಸುವಲ್ಲಿ ತಮ್ಮ ಬದ್ದತೆಯನ್ನು ಲಿಖಿತವಾಗಿ ಪಡೆದುಕೊಳ್ಳುವುದು ಹಾಗೂ ರಾಜಕೀಯ ಪಕ್ಷಗಳು ಕೂಡಾ ಈ ಅಂಶಗಳನ್ನು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರತಿಬಿಂಬಿಸುಂತೆ ಒತ್ತಾಯಿಸಲು ನಿರ್ಣಯಿಸಲಾಯಿತು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ಮತ ಚಲಾಯಿಸುವಂತೆ ಹಾಗೂ ಮತ ಚಲಾಯಿಸುವಾಗ ಮಕ್ಕಳ ಶಿಕ್ಷಣದ ಹಕ್ಕಿನ ಪರವಾದ ಅಂಶಗಳನ್ನು ಗಮನದಲ್ಲಿಟ್ಟು ಮತ ಚಲಾಯಿಸುವಂತೆ ಜನಜಾಗೃತಿ ಮೂಡಿಸುವ ಆಂದೋಲನವನ್ನು ಹವಿ್ಮುಕೊಳ್ಳಲು ಸಹ ನಿರ್ಧರಿಸಲಾಯಿತು.
ನಿರ್ಣಯಗಳು: ದೇಶದ ಒಟ್ಟು ಉತ್ಪನ್ನದಲ್ಲಿ ಶಿಕ್ಷಣಕ್ಕೆ ಶೇ.6ರಷ್ಟು ಮೀಸಲಿಟ್ಟು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಮಕ್ಕಳ ಶಿಕ್ಷಣ ಹಕ್ಕಿನ ಕಾಯಿದೆಯ ಅನುಷ್ಠಾನವನ್ನು ಖಾತರಿಗೊಳಿಸಬೇಕು. ಹುಟ್ಟಿನಿಂದ 18 ವರ್ಷದ ಎಲ್ಲಾ ಮಕ್ಕಳಿಗೆ ಆರೈಕೆ, ಅಭಿವೃದ್ಧಿ ಮತ್ತು ಗುಣಾತ್ಮಕ ಶಿಕ್ಷಣ ಕಾನೂನು ಬದ್ಧ ಹಕ್ಕಾಗಿದ್ದು ಕಾಯಿದೆಯಲ್ಲಿ ಬದಲಾವಣೆ ತರಬೇಕು. ಪೂರ್ವ ಪ್ರಾಥಮಿಕ ಹಾಗೂ ಪದವಿ ಪೂರ್ವ ಶಿಕ್ಷಣದವರೆಗೆ ಕಾಯಿದೆಯನ್ನು ವಿಸ್ತರಿಸುವುದರ ಜೊತೆಗೆ ಮಗುವಿನ ಪರಿಪೂರ್ಣ ಬದುಕಿಗೆ ಶಿಕ್ಷಣ ಪೂರಕವಾಗಬೇಕು.
ಬಾಲ ಕಾರ್ಮಿಕ ಪದ್ದತಿ ಪೂರ್ಣ ನಿಷೇಧ ಮಾಡುತ್ತೇವೆ ಎಂಬುದನ್ನು ಎಲ್ಲಾ ಜಿಲ್ಲೆಯ ಜನಪ್ರತಿನಿಧಿಗಳು ಘೋಷಿಸಿ ಖಾತರಿಪಡಿಸಿಕೊಳ್ಳಬೇಕು. ಸರಕಾರಿ ಶಾಲೆಗಳನ್ನು ಮುಚ್ಚುವ/ ವಿಲೀನಗೊಳಿಸುವ ಕೆಲಸ ತಕ್ಷಣ ನಿಲ್ಲಸಿ, ಸರಕಾರಿ ಶಾಲೆಗೆ ಆರ್ಟಿಇ ಕಾಯಿದೆಯಲ್ಲಿ ವಿವರಿಸಿದ ಎಲ್ಲಾ ಕನಿಷ್ಠ ಮಾಪಕ ಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಬೇಕು.
ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಬಲವರ್ಧನೆ ಮಾಡು ವಲ್ಲಿ ವಾರ್ಷಿಕವಾಗಿ ಅಂದರೆ ಶಾಲಾ ಆರಂಭದಲ್ಲೇ ಎಸ್ಡಿಎಂಸಿ ಸದಸ್ಯರಿಗೆ ಇಲಾಖಾ ವತಿಯಿಂದ ತರಬೇತಿಯನ್ನು ನೀಡಬೇಕು. ಇಂಗ್ಲಿಷ್ ಒಂದು ಭಾಷೆಯಾಗಿರಲಿ, ಮಾದ್ಯಮವಾಗಿ ಪರಿಗಣಿಸದೆ ಸರಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ದಿಗೆ ಪ್ರೋತ್ಸಾಹ ನೀಡಬೇಕು.ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣ ಪೂರ್ಣವಾಗಲಿ ನಿಲ್ಲಬೇಕು.