ದ.ಕ.ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ: ಫೆಡರೇಶನ್ ಅಧ್ಯಕ್ಷರಾಗಿ 4ನೇ ಬಾರಿಗೆ ಯಶ್ಪಾಲ್ ಆಯ್ಕೆ
ಉಡುಪಿ, ಎ.3: ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸಹಕಾರಿ ರಂಗದ ಹಿರಿಯ ಸಂಸ್ಥೆಯಾದ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ಗೆ ಸತತ 4ನೇ ಅವಧಿಗೆ ಉಡುಪಿಯ ಯಶ್ಪಾಲ್ ಎ.ಸುವರ್ಣ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಪುರುಷೋತ್ತಮ ಅಮೀನ್ ಉಳ್ಳಾಲ ಉಪಾಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಬುಧವಾರ ನಡೆದ ಫೆಡರೇಶನ್ನ ಆಡಳಿತ ಮಂಡಳಿ ಸಭೆಯಲ್ಲಿ ಚುನಾವಣಾಧಿಕಾರಿ ಮಂಗಳೂರಿನ ಲೆಕ್ಕಪರಿಶೋಧನಾ ಉಪನಿರ್ದೇಶಕ ಮಹೇಶ್ವರಪ್ಪ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಯಶ್ಪಾಲ್ ಸುವರ್ಣ 2009ರಲ್ಲಿ ಫೆಡರೇಶನಿನ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ಸತತ ಪುನರಾಯ್ಕೆಗೊಳ್ಳುತಿದ್ದಾರೆ. ಫೆಡರೇಶನಿನ ಪ್ರಮುಖ ವ್ಯವಹಾರಗಳಾದ ಸಿಗಡಿ ಮಾರಾಟ, ಡೀಸಿಲ್ ಮಾರಾಟ, ಮೀನುಗಾರಿಕಾ ಸಲಕರಣೆಗಳ ಮಾರಾಟ ಹಾಗೂ ನೂತನ ಬ್ಯಾಂಕಿಂಗ್ ವಿಭಾಗವನ್ನು ಆರಂಭಿಸಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಹಲವಾರು ಯೋಜನೆಗಳನ್ನು ಸಂಸ್ಥೆಗೆ ಪಡೆದು ಅನುಷ್ಠಾನಗೊಳಿಸಿ 46 ಕೋಟಿಗಳಷ್ಟಿದ್ದ ಸಂಸ್ಥೆಯ ವ್ಯವಹಾರವನ್ನು ಸುವಾರು 250 ಕೋಟಿ ರೂ. ಹೆಚ್ಚಿಸಿದ್ದಾರೆ.
ಫೆಡರೇಶನ್ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ 85 ಸದಸ್ಯ ಸಹಕಾರಿ ಸಂಸ್ಥೆಗಳನ್ನು (1ಲಕ್ಷಕ್ಕೂ ಮಿಕ್ಕಿ ಸದಸ್ಯರು), ಸುಮಾರು 14,000 ದಷ್ಟು ವೈಯಕ್ತಿಕ ಸದಸ್ಯರನ್ನು ಹೊಂದಿದೆ. ಹಿಂದೆ ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಸಂಸ್ಥೆ ಇದೀಗ ನಿರಂತರವಾಗಿ ಲಾಭಗಳಿಸುತ್ತಾ 10 ವರ್ಷಗಳಲ್ಲಿ ಸುಮಾರು 40 ಕೋಟಿ ರೂ. ಲಾಭ ದಾಖಲಿಸಿದೆ.
ಮುಂಬರುವ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ವಿಸ್ತರಿಸಿ ಹೊಸ ಶಾಖೆಗಳ ಆರಂಭ, ಮೀನುಗಾರರ ಅರ್ಥಿಕ ಸ್ವಾವಲಂಬನೆಗಾಗಿ ಸುಮಾರು 25 ಸಾವಿರ ಸದಸ್ಯರನ್ನೊಳಗೊಂಡ ಸ್ವಸಹಾಯ ಸಂಘಗಳ ರಚನೆಯ ಮೂಲಕ ಶೇ.2ರ ಬಡ್ಡಿದರದಲ್ಲಿ ಸಾಲ ವಿತರಣೆ, ಮೀನು ಸೇವನೆ ಪ್ರೋತ್ಸಾಹಿಸುವ ಹಾಗೂ ಗ್ರಾಹಕರಿಗೆ ತಾಜಾ ಮೀನು ಖಾದ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮತ್ಸ ಕ್ಯಾಂಟಿನ್ನ ಆರಂ, ಮೀನು ಸಂಸ್ಕರಣ ಘಟಕ ಹಾಗೂ ಶೀತಲೀಕರಣ ಘಟಕ ಸ್ಥಾಪನೆ ಮುಂತಾದ ಯೋಜನೆ ನೂತನ ಆಡಳಿತ ಮಂಡಳಿಯ ಮುಂದಿದೆ.
ಫೆಡರೇಶನ್ನ ಆಡಳಿತ ಮಂಡಳಿ ಸಭೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಪುರುಷೋತ್ತಮ್ ಅಮೀನ್ ಉಳ್ಳಾಲ, ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಗೊಂಡ ಆನಂದ್ ಎ, ಸತೀಶ್ ಆರ್ ಸಾಲ್ಯಾನ್, ರಾಮಚಂದ್ರ ಕುಂದರ್, ಶಿವಾಜಿ ಎಸ್ ಅಮೀನ್, ದೇವಪ್ಪಕಾಂಚನ್, ಸುರೇಶ್ ಸಾಲ್ಯಾನ್, ರಾಮಕಾಂಚನ್, ಚಿದಾನಂದ, ಸುಧೀರ್ ಶ್ರೀಯಾನ್, ಉಷಾ ರಾಣಿ, ಸುಧಾಕರ್, ಬೇಬಿ ಎಚ್. ಸಾಲ್ಯಾನ್ ಮತ್ತು ಇಂದಿರಾ ಉಪಸ್ಥಿತರಿದ್ದರು.