ದ.ಕ. ಜಿಲ್ಲೆಗೆ ಬಿಜೆಪಿ ಕೊಡುಗೆ ಬಗ್ಗೆ ಚರ್ಚೆಗೆ ಬರಲಿ: ಕಾಂಗ್ರೆಸ್ ಮಾಧ್ಯಮ ವಕ್ತಾರ ವಿನಯರಾಜ್ ಸವಾಲು
ಮಂಗಳೂರು, ಎ.4: ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸುತ್ತಿರುವ ಬಿಜೆಪಿಯವರು ದ.ಕ. ಜಿಲ್ಲೆಗೆ ಕಳೆದ 28 ವರ್ಷಗಳಲ್ಲಿ ಬಿಜೆಪಿಯ ಕೊಡುಗೆ ಏನು, ಕಳೆದ 10 ವರ್ಷಗಳಲ್ಲಿ ಹಾಲಿ ಸಂಸದರ ಕೊಡುಗೆ ಏನು ಎಂಬ ಬಗ್ಗೆ ಅಂಕಿಅಂಶಗಳ ಜತೆಗೆ ಚರ್ಚೆಗೆ ಬರಲಿ, ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತ ಕೂಡ ಅವರ ಹೇಳಿಕೆಗಳನ್ನು ಸುಳ್ಳು ಎಂದು ಸಾಬೀತು ಮಾಡಬಲ್ಲ ಎಂದು ಕಾಂಗ್ರೆಸ್ನ ಜಿಲ್ಲಾ ಮಾಧ್ಯಮ ವಕ್ತಾರ ಎ.ಸಿ. ವಿನಯ್ ರಾಜ್ ಸವಾಲೆಸೆದಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ಆದರ್ಶ ಗ್ರಾಮದಲ್ಲಿ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು ವಿದ್ಯುತ್ ಸಂಪರ್ಕವೇ ಸರಿಯಾಗಿಲ್ಲ ಎಂದು ಆಪಾದಿಸಿದರು.
ಸ್ಮಾರ್ಟ್ ಸಿಟಿಯನ್ನು ಕೇಂದ್ರದ ಕೊಡುಗೆ ತಮ್ಮ ಸಾಧನೆ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ 2100 ಕೋಟಿ ರೂ.ಗಳ ಈ ಯೋಜನೆಯಲ್ಲಿ ಕೇಂದ್ರ ಸರಕಾರದ ಪಾಲು ನಾಲ್ಕನೇ ಒಂದು ಭಾಗ ಮಾತ್ರ. 500 ಕೋಟಿ ರೂ.ಗಳನ್ನು ಮಾತ್ರ ಕೇಂದ್ರ ಸರ್ಕಾರ ಭರಿಸಲಿದೆ. ಉಳಿದ 500 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಹಾಗೂ ಬಾಕಿ ಹಣವನ್ನು ಸ್ಥಳೀಯ ಸಂಸ್ಥೆಗಳು ಭರಿಸಬೇಕಾಗಿದೆ. ಹಾಗಿರುವಾಗ ಕೇಂದ್ರದ ಯೋಜನೆ ಹೇಗಾಗುತ್ತದೆ. 600 ಮೀಟರ್ ಉದ್ದ ಪಂಪ್ವೆಲ್ ಮೇಲ್ಸೇತುವೆ ಮಾಡಲು 8 ವರ್ಷಗಳಾದರೂ ಸಾಧ್ಯವಾಗಿಲ್ಲ. ಜಿಲ್ಲೆಯ ವ್ಯಾಪಾರ ವಹಿವಾಟಿನ ಪ್ರಧಾನ ಸಂಪರ್ಕ ರಸ್ತೆಯಾದ ತೊಕ್ಕೊಟ್ಟು ರಸ್ತೆಯ ಮೇಲ್ಸೇತುವೆ ಕೂಡ ಪೂರ್ಣಗೊಂಡಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಸಂಸದ ನಳಿನ್ ಕುಮಾರ್ ಕಟೀಲು ಒಬ್ಬ ವೈಫಲ್ಯಗಳ ಸರದಾರ ಎಂದು ಹೇಳಬಹುದು ಎಂದವರು ನುಡಿದರು.
ಮಂಗಳೂರು-ತಲಪಾಡಿ-ಸುರತ್ಕಲ್-ಕುಂದಾಪುರ-ಗೋವಾ ಗಡಿ ತನಕ ನಾಲ್ಕು ಪಥಗಳ ಹೆದ್ದಾರಿ ಕಾಮಗಾರಿ ಅಭಿವೃದ್ಧಿ ಯೋಜನೆ ನಿರ್ಮಿಸಿ, ನಿರ್ವಹಿಸಿ ಹಸ್ತಾಂತರಿಸುವ (ಬಿಒಟಿ)ಮಾದರಿಯಲ್ಲಿ ಅನುಷ್ಠಾನ ಆಗಬೇಕಿತ್ತು. 2016ರಲ್ಲಿ ಆರಂಭಗೊಂಡ ಈ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸಲಾಗುವುದು ಎಂದು ಪದೇ ಪದೇ ಸಂಸದರು ಹೇಳುತ್ತಾರೆ. ಆದರೆ ರೈಲು ನಿಲ್ದಾಣದ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಸಂಸದರಾಗಿದ್ದ ಸಂದರ್ಭ ಜಿಲ್ಲೆಗೆ ಬಂದರು ನಿರ್ಮಾಣ, ರೈಲು ನಿರ್ಮಾಣ, ವಿಮಾನ ನಿಲ್ದಾಣ ಜತೆಗೆ ಎನ್ಐಟಿಕೆಯಂತಹ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿವೆ ಎಂದು ಅವರು ಹೇಳಿದರು.
28 ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿಯವರೇ ಸಂಸದರಾಗಿ ಆಯ್ಕೆಯಾದರೂ ಅಭಿವೃದ್ಧಿ ಶೂನ್ಯವಾಗಿದೆ. ಜಿಲ್ಲೆಯಲ್ಲಿ ಆಗಿರುವ ಕಾಮಗಾರಿಗಳೆಲ್ಲವೂ ಕಾಂಗ್ರೆಸ್ ಅವಧಿಯದ್ದೆ. ಆದ್ದರಿಂದ ವಿದ್ಯಾವಂತ ಯುವಜನತೆಯ ಪ್ರತಿನಿಧಿ, ಸರ್ವಧರ್ಮ ಸಮಬಾಳ್ವೆಯ ಮಿಥುನ್ ರೈ ಅವರ ಪರ ಜನರು ಮತದಾನ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಟಿ.ಕೆ.ಸುಧೀರ್, ವಿಶ್ವಾಸ್ ದಾಸ್, ನವನೀತ್, ನಝೀರ್ ಬಜಾಲ್, ಫಾರೂಕ್, ಪ್ರಕಾಶ್, ಸದಾಶಿವ ಉಳ್ಳಾಲ, ನೀರಜ್ಪಾಲ್ ಉಪಸ್ಥಿತರಿದ್ದರು.