ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ: ತಾರಾ ಭರವಸೆ
ಮೀನುಗಾರ ಮಹಿಳೆಯರ ಜತೆ ಬಿಜೆಪಿಯ ತಾರಾ ಸಂವಾದ
ಮಂಗಳೂರು, ಎ. 4: ಸ್ಟೇಟ್ಬ್ಯಾಂಕ್ನಲ್ಲಿ ಅವ್ಯವಸ್ಥೆಯಿಂದ ಕೂಡಿದ ಮೀನು ಮಾರುಕಟ್ಟೆಯನ್ನು ಮುಂದಿನ ದಿನಗಳಲ್ಲಿ ಇದೇ ಜಾಗದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುವುದು ಎಂದು ಬಿಜೆಪಿಯ ಮುಖಂಡೆ, ನಟಿ ತಾರಾ ಮೀನುಗಾರ ಮಹಿಳೆಯರಿಗೆ ಭರವಸೆ ನೀಡಿದರು.
ನಗರದ ಸ್ಟೇಟ್ ಬ್ಯಾಂಕ್ನಲ್ಲಿನ ಮೀನು ಮಾರುಕಟ್ಟೆಯಲ್ಲಿ ಮೀನುಗಾರ ಮಹಿಳೆಯರ ಜತೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಮಾರುಕಟ್ಟೆಯಲ್ಲಿ ಸುಮಾರು 600 ಕ್ಕೂ ಅಧಿಕ ಮೀನುಗಾರ ಮಹಿಳೆಯರು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಎಲ್ಲ ಸಮಸ್ಯೆ ಗಳನ್ನು ಆಲಿಸಿದ್ದೇನೆ. ಮೀನುಗಾರ ಮಹಿಳೆಯರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ವಾಗ್ದಾನ ನೀಡಿದರು.
ಕೇಂದ್ರ ಸರಕಾರವು ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದಲ್ಲಿದ್ದ ಮೀನುಗಾರಿಕೆ ಇಲಾಖೆಯನ್ನು ಪ್ರತ್ಯೇಕ ಸಚಿವಾಲಯ ಮಾಡುವುದಾಗಿ ಪ್ರಕಟಿಸಿದೆ. ಇದು ಮೀನುಗಾರರಿಗೆ ಸಂತಸದ ಸುದ್ದಿ. ಮೀನುಗಾರರ ಸಮಗ್ರ ಸಮಸ್ಯೆ, ನೋವುಗಳನ್ನು ನಿವಾರಿಸುವ ಕಾರ್ಯದಲ್ಲಿ ಕೇಂದ್ರ ಸರಕಾರ ಮುಂದಾಗಲಿದೆ. ಮೀನುಗಾರಿಕೆ ಅವಲಂಬಿಸಿರುವ ಕುಟುಂಗಳಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಿದರು.
ರಾಜ್ಯ ಸರಕಾರವು ಇಲ್ಲಿನ ಮೀನುಮಾರುಕಟ್ಟೆಯ ಸಮಸ್ಯೆಗಳನ್ನು ನಿವಾರಿಸಬೇಕಾಗಿತ್ತು. ಆದರೆ ರಾಜ್ಯ ಸರಕಾರ ಕಣ್ಣುಮುಚ್ಚಿ ಕುಳಿತಿದೆ. ಮೀನುಗಾರ ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ರಾಜ್ಯದಲ್ಲಿ ಬಿಜೆಪಿ ಸರಕಾರ ಬರಬೇಕು ಎಂದರು.
ರಾಜ್ಯಾದ್ಯಂತ ಕಳೆದ ಹಲವು ದಿನಗಳಿಂದ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಎಲ್ಲೆಡೆಯೂ ನರೇಂದ್ರ ಮೋದಿ ಬಗ್ಗೆ ಹೆಚ್ಚು ಒಲವು ಕೇಳಿ ಬರುತ್ತಿದೆ. ಮತದಾರ ರಲ್ಲಿ ಅರಿವು ಮೂಡಿದೆ. ಮೊದಲು ರಾಜ್ಯದ, ದೇಶದ ಚುನಾವಣೆ ಎನ್ನುವ ಮಾತಿತ್ತು. ಸಾರ್ವಜನಿಕರೇ ಮುಂದೆ ಬಂದು ಮೋದಿಗೇ ಮತ ಹಾಕುವುದಾಗಿ ತಿಳಿಸಿದ್ದಾರೆ. ಬಿಜೆಪಿಗೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ನೋಡದೆಯೇ ಕೇವಲ ಮೋದಿ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿದು ಮತ ಹಾಕಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಬೇಕು. ಸದೃಢ ದೇಶಕ್ಕಾಗಿ, ಭಯೋತ್ಪಾದನೆ ಮುಕ್ತ ದೇಶವಾಗಲು ಮೋದಿಗೆ ಬೆಂಬಲಿಸಿ ಎಂದು ಮೀನುಗಾರ ಮಹಿಳೆಯರಿಗೆ ಮನವಿ ಮಾಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ತಾರಾ, ಮೀನುಗಾರ ಮಹಿಳೆಯರಿಗೆ ಭರವಸೆ ಕೊಡಲು ನಾನು ಪಕ್ಷದ ಮುಖಂಡರಲ್ಲ; ಬದಲಾಗಿ ಕೇವಲ ನಾನೊಬ್ಬ ಬಿಜೆಪಿ ಕಾರ್ಯಕರ್ತೆಯಾಗಿ ಬಂದಿದ್ದೇನೆ. ಮೀನುಗಾರ ಮಹಿಳೆಯರ ನೋವುಗಳನ್ನು ಆಲಿಸಲು ಬಂದಿದ್ದೇನೆ. ಇಲ್ಲಿನ ಮಾರುಕಟ್ಟೆ ಸ್ಥಳಾಂತರಗೊಳ್ಳುತ್ತಿರುವುದು ಹಾಗೂ ಮೀನು ಮಾರಾಟಕ್ಕೆ ಸ್ಥಳೀಯ ಸಂಸ್ಥೆಗಳು ಅವಕಾಶ ನೀಡದಿರುವ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
‘ದಾನವಾಗಿ ಸಿಕ್ಕ ಮಾರುಕಟ್ಟೆ’
ಸ್ಟೇಟ್ಬ್ಯಾಂಕ್ನಲ್ಲಿನ ಮೀನು ಮಾರಾಟ ಮಾರುಕಟ್ಟೆಯ ಜಾಗವನ್ನು ದಾನದ ರೂಪದಲ್ಲಿ ನೀಡಲಾಗಿದೆ. ಬ್ರಿಟಿಷರ ಕಾಲದಿಂದ ಈ ಮಾರುಕಟ್ಟೆ ಕಾರ್ಯಾಚರಿಸುತ್ತಿದೆ. ಮೀನು ಮಾರುಕಟ್ಟೆ ಇದೇ ಜಾಗದಲ್ಲಿ ನಮಗೆ ಬೇಕು. ಇದು ಎಲ್ಲರಿಗೂ ಅನುಕೂಲವಾಗಲಿದೆ. ಇಲ್ಲಿಯೇ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಿಕೊಡಬೇಕು ಎಂದು ಮೊಗವೀರ ಮಹಿಳೆಯರ ಹಸಿ ಮೀನುಗಾರ ಮಾರಾಟಗಾರರ ಮಂಡಳಿಯ ಉಪಾಧ್ಯಕ್ಷ ಮೋಹನ್ ಕುಲಾಲ್ ಅವರು ತಾರಾ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ತಾರಾ, ಮೀನುಗಾರರ ಎಲ್ಲ ಭರವಸೆಗಳನ್ನು ಈಡೇರಿಸಲು ಶ್ರಮಿಸುವುದಾಗಿ ತಿಳಿಸಿದರು.
‘ಮೋದಿ ಹೆಸರಿನಿಂದಲೇ ಮತಯಾಚನೆ’
ಮೋದಿಯನ್ನು ಬಿಟ್ಟು ಅಭ್ಯರ್ಥಿಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ನಾಯಕಿ, ನಟಿ ತಾರಾ, ‘ಕಾಂಗ್ರೆಸ್ನಲ್ಲಿ ಇಂದಿಗೂ ಇಂದಿರಾಗಾಂಧಿ, ರಾಜೀವ್ಗಾಂಧಿ ಹಾಗೂ ದೇವೇಗೌಡರ ಕುಟುಂಬದ ಬಗ್ಗೆ ಹೇಳಿಕೊಂಡೇ ಮತ ಪಡೆಯಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯು ಹೊಸ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಹೀಗಿರುವಾಗ ನಾವೇಕೆ ಮೋದಿ ಹೆಸರನ್ನು ಹೇಳಿಬಾರದು ಎಂದು ಪ್ರಶ್ನಿಸಿದ ಅವರು, ನರೇಂದ್ರ ಮೋದಿಯ ಹೆಸರನ್ನು ಹೇಳಿಯೇ ಮತಯಾಚನೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು.
‘ಎ.9ರಂದು ಮೀನುಗಾರರ ಸಮಾವೇಶ’
ಮಂಗಳೂರಿನಲ್ಲಿ ಇದೇ ತಿಂಗಳು ಎ.9ರಂದು ನಡೆಯುವ ಮೀನುಗಾರರ ಸಮಾವೇಶದಲ್ಲಿ ಮೀನುಗಾರರು ತಮ್ಮ ಸಮಸ್ಯೆಗಳು, ಬೇಡಿಕೆಗಳನ್ನು ಸಲ್ಲಿಸಬಹುದು. ಮುಕ್ತವಾಗಿ ಮಾತನಾಡಲು ಪಕ್ಷವು ಅವಕಾಶ ಮಾಡಿಕೊಡಲಿದೆ. ಎಲ್ಲ ಮೀನುಗಾರರು ಭಾಗವಹಿಸಲು ನಟಿ ತಾರಾ ಮನವಿ ಮಾಡಿದರು.