ಲೋಕಸಭಾ ಚುನಾವಣೆ: 2400 ಗೃಹ ರಕ್ಷಕರು ಕರ್ತವ್ಯಕ್ಕೆ ನಿಯೋಜನೆ
ಮಂಗಳೂರು, ಎ.4: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ವಲಯದ 2400 ಗೃಹರಕ್ಷಕರನ್ನು ಲೋಕಸಭಾ ಚುನಾವಣೆ ಸಂದರ್ಭ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಡಿಐಜಿಪಿ ಹಾಗೂ ಅಪರ ಸಮಾದೇಷ್ಟರು ಗೃಹರಕ್ಷಕದಳ ಡಾ.ಡಿ.ಸಿ.ರಾಜಪ್ಪ ತಿಳಿಸಿದ್ದಾರೆ.
ಕೇರಳ ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ 350 ಗೃಹರಕ್ಷಕರನ್ನು ಕರ್ತವ್ಯಕ್ಕೆ ಕಳುಹಿಸಲಾಗುವುದು. ರಾಜ್ಯದಲ್ಲಿ ಇರುವ 24 ಸಾವಿರ ಗೃಹರಕ್ಷಕರ ಪೈಕಿ 23 ಸಾವಿರ ಗೃಹರಕ್ಷಕರನ್ನು ಚುನಾವಣೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣೆ ಸಂದರ್ಭ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸಲು ಗೃಹರಕ್ಷಕರಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ. ಅವರ ಪ್ರಯಾಣ, ವಸತಿ, ಊಟದ ವ್ಯವಸ್ಥೆಗಳನ್ನು ಪೊಲೀಸರಿಗೆ ಸಮಾನವಾಗಿ ಕಲ್ಪಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆಯಾ ಜಿಲ್ಲೆಯ ಕಮಾಂಡೆಂಟ್ಗಳು ಲೋಪವಾಗದಂತೆ ನಿಗಾ ವಹಿಸಲಿದ್ದಾರೆ ಎಂದರು.
ಚುನಾವಣಾ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಅಂಚೆ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ ಮತದಾನದಿಂದ ವಂಚಿತರಾಗು ವುದು ತಪ್ಪಲಿದೆ. ಆಯಾ ಜಿಲ್ಲೆಯ ಪೊಲೀಸ್ ಅಧೀಕ್ಷಕರು, ಪೊಲೀಸ್ ಆಯುಕ್ತರ ಜತೆ ಸಮನ್ವಯ ಸಾಧಿಸಿ ಗೃಹರಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಡಿಐಜಿಪಿ ವಿವರಿಸಿದರು.
ರಾಜ್ಯದ ಎಲ್ಲ ಗೃಹರಕ್ಷಕರಿಗೆ ಬೆಂಗಳೂರು ಮಾದರಿಯಲ್ಲಿ ವೇತನ ನೀಡುವ ಬೇಡಿಕೆ ಇದ್ದು, ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ ಎಂದ ಅವರು ಗೃಹರಕ್ಷಕರ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾಕ್ಷಾಧಾರ ಸಮೇತ ದೂರುಗಳು ಬಂದಲ್ಲಿ ವಿಚಾರಣೆ ನಡೆಸದೆ ಅವರನ್ನು ಕರ್ತವ್ಯದಿಂದ ವಜಾ ಮಾಡಲಾಗುವುದು ಎಂದರು.
ಉಡುಪಿ ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ್, ಕಾರವಾರ ಕಮಾಂಡೆಂಟ್ ದೀಪಕ್, ದ.ಕ. ಜಿಲ್ಲಾ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು, ಡೆಪ್ಯುಟಿ ಕಮಾಂಡೆಂಟ್ ರಮೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.