ಅಕ್ರಮ ಕಟ್ಟಡದಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ: ವೇದವ್ಯಾಸ ಕಾಮತ್ ಆರೋಪ
ಮಂಗಳೂರು, ಎ.4: ನಗರದ ಬೆಂದೂರ್ವೆಲ್ನಲ್ಲಿ ‘ಕಟ್ಟಡ ಪೂರ್ಣಗೊಂಡಿರುವ ಪ್ರಮಾಣಪತ್ರ’ (ಕಂಪ್ಲಿಶನ್ ಸರ್ಟಿಫಿಕೇಟ್) ಪಡೆಯದ ನಿರ್ಮಾಣ ಹಂತದ ವಾಣಿಜ್ಯ ಕಟ್ಟಡದಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಚುನಾವಣಾ ಕಚೇರಿಯನ್ನು ತೆರೆದಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ನಗರದ ಬಂಟ್ಸ್ ಹಾಸ್ಟೆಲ್ನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಗುರುವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂದೂರ್ವೆಲ್ನಲ್ಲಿ ಜೋಕೀಂ ಲೂವಿಸ್ ಪಿಂಟೋ ಎಂಬವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡವನ್ನು ಕಾಂಗ್ರೆಸ್ ಬಳಸಿಕೊಂಡಿರುವುದು ಕಾಂಗ್ರೆಸ್ ತನ್ನ ನೈಜ ಸಂಸ್ಕೃತಿಯನ್ನು ಜನರ ಮುಂದೆ ತೋರಿಸಿದೆ ಎಂದರು.
ಅಲ್ಲಿನ ಕಟ್ಟಡ ಮಾಲಕರು ‘ಕಟ್ಟಡ ಪೂರ್ಣಗೊಂಡಿರುವ ಪ್ರಮಾಣಪತ್ರ’ ಪಡೆದಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ಪ್ರಕಾರ ಪ್ರಮಾಣ ಪತ್ರ ಪಡೆಯದೇ ಬಳಸಿಕೊಂಡರೆ ಅದು ಅಕ್ರಮ ಚಟುವಟಿಕೆಯಾಗಲಿದೆ. ಚುನಾವಣೆ ಮೊದಲೇ ಇಂತಹ ಅಕ್ರಮ ಚಟುವಟಿಕೆ ನಡೆಸುವ ಮಾನಸಿಕತೆಯನ್ನು ಅಭಿವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಪಕ್ಷವು ಚುನಾವಣೆ ಬಳಿಕ ಇನ್ನು ಹೆಚ್ಚಿನ ಅಕ್ರಮಗಳನ್ನು ನಡೆಸಲಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಕಿಶೋರ್ ರೈ, ಪ್ರೇಮಾನಂದ ಶೆಟ್ಟಿ, ಭಾಸ್ಕರ್ ಚಂದ್ರ ವಸಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.