ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಕಠಿಣ ಕ್ರಮ: ಕೇಂದ್ರ ವೀಕ್ಷಕರಿಂದ ಸೂಚನೆ
ಉಡುಪಿ, ಎ.4: ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ಕೃಷ್ಣ ಕುನಾಲ್ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಗುರುವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಚುನಾವಣಾ ಸಿದ್ಧತೆಗಳ ಕುರಿತು ಕರೆದ ಸಭೆಯಲ್ಲಿ ಅವು ಈ ಸೂಚನೆಗಳನ್ನು ನೀಡಿದರು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಹಲವಾರು ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಪಾಸಣಾ ತಂಡದ ಅಧಿಕಾರಿಗಳು ವಿವಿದೆಡೆ ತಪಾಸಣೆಗೆ ಹೋದಾಗ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಲವಾರು ಪ್ರಕರಣ ಕಂಡುಬಂದಿವೆ. ಈ ಹಿನ್ನಲೆಯಲ್ಲಿ ಇಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಅವರು ನಿರ್ದೇಶಿಸಿದರು.
ಶಸ್ತ್ರಾಸ್ತ್ರಗಳನ್ನು ಇದುವರೆಗೂ ಪೊಲೀಸು ಠಾಣೆಗೆ ಠೇವಣಿ ಇಡದವರ ಪರವಾನಿಗೆಯನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಶಿಪಾರಸ್ಸು ಮಾಡು ವಂತೆ ಕೇಂದ್ರ ವೀಕ್ಷಕರು ಪೋಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಚುನಾವಣಾ ಪ್ರಚಾರವನ್ನು ರಾತ್ರಿ 10 ಗಂಟೆ ನಂತರ ಯಾವುದೇ ಕಾರಣಕ್ಕೂ ನಡೆಸುವಂತಿಲ್ಲ. ಆಸ್ಪತ್ರೆ ಮತ್ತು ಶಾಲಾ ಪರಿಸರದಲ್ಲಿ ಚುನಾವಣಾ ಸಭೆ, ಸಮಾರಂಭಗಳಿಗೆ ಅವಕಾಶ ನೀಡದಂತೆ ಅವರು ಸೂಚಿಸಿದರು.
ಸೂಕ್ಷ್ಮ ಮತಗಟ್ಟೆಗಳಿಗೆ ವೆಬ್ ಕ್ಯಾಮರಾ ಅಳವಡಿಸಬೇಕು. ಚುನಾವಣಾ ಕರ್ತವ್ಯದಲ್ಲಿರುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಕಡ್ಡಾಯವಾಗಿ ಅಳವಡಿಸ ಬೇಕು. ಸಂಶಯಾಸ್ಪದ ಬ್ಯಾಂಕ್ ವ್ಯವಹಾರಗಳ ಮೇಲೆ ನಿಗಾ ಇಡುವಂತೆ ಕೃಷ್ಣ ಕುನಾಲ್ ಸಬಂಧಿತರಿಗೆ ತಿಳಿಸಿದರು. ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಚುನಾವಣಾ ಸಿದ್ದತೆಗಳ ಬಗ್ಗೆ ವಿವರಣೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಸಿಂಧೂ ಬಿ ರೂಪೇಶ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚುನಾವಣಾ ಜಾಗೃತಿ ಮೂಡಿಸಲು, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸಿದ್ದಪಡಿಸಿರುವ ಆಕರ್ಷಕ ಕೊಡೆಯನ್ನು ಕೇಂದ್ರ ಚುನಾವಣಾ ವೀಕ್ಷಕರು ಬಿಡುಗಡೆಗೊಳಿಸಿದರು.