ಎ.5ರಿಂದ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ
ಉಡುಪಿ, ಎ. 4: ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಉಡುಪಿಯ ಜನಪ್ರಿಯ ನ್ಯಾಯವಾದಿಯಾಗಿದ್ದ ದಿ. ಪಿ.ಶಿವಾಜಿ ಶೆಟ್ಟಿ ಸ್ಮರಣಾರ್ಥ 3ನೇ ವರ್ಷದ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಎ.5ರಿಂದ 7ರವರೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಕಣಿವೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಎ.7ರಂದು ಸಂಜೆ 4 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಮುಖ್ಯ ಅತಿಥಿಗಳಾಗಿರುವರು. ವಿಶ್ರಾಂತ ಉಪಕುಲಪತಿ ಟಿ.ಆರ್. ಸುಬ್ರಹ್ಮಣ್ಯ, ಹೈಕೋರ್ಟ್ ವಕೀಲ ಎಸ್. ವಿಶ್ವಜಿತ್ ಶೆಟ್ಟಿ, ಹಿರಿಯ ವಕೀಲ ಎಂ.ವಿ. ಶಂಕ ಭಟ್ ಭಾಗವಹಿಸಲಿದ್ದಾರೆ ಎಂದರು.
ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದೆ. ಅಣಕ ನ್ಯಾಯಾಲಯ, ತೀರ್ಪು ಬರೆಯುವುದು ಹಾಗೂ ಕಾನೂನಿಗೆ ಸಂಬಂಧಿಸಿದಂತೆ ಕ್ವಿಝ್ನಲ್ಲಿ ವಿಜೇತರಿಗೆ ಬಹುಮಾನಗಳಿವೆ. 28 ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜಯಂತಿ ಪಿ. ಶಿವಾಜಿ ಶೆಟ್ಟಿ, ಕಾರ್ಯಕ್ರಮ ಸಂಯೋಜಕಿ ಡಾ. ನಿರ್ಮಲಾ ಕುಮಾರಿ, ಹಿರಿಯ ಉಪನ್ಯಾಸಕ ಶಂಕರಮೂರ್ತಿ ಉಪಸ್ಥಿತರಿದ್ದರು.