ಚುನಾವಣೆ ಕರ್ತವ್ಯದಲ್ಲಿ ಕ್ರೈಸ್ತರಿಗೆ ವಿನಾಯಿತಿ: ಜಿಲ್ಲಾಧಿಕಾರಿಗೆ ಮನವಿ
ಉಡುಪಿ, ಎ.4: ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ ಕ್ರೈಸ್ತ ಸಮುದಾಯದ ಮನವಿಯನ್ನು ಪರಿಗಣಿಸಿ ಗುಡ್ಪ್ರೈಡೇ ದಿನ ಕ್ರೈಸ್ತ ಮತಗಟ್ಟೆ ಅಧಿಕಾರಿಗಳಿಗೆ ಕರ್ತವ್ಯದಿಂದ ವಿನಾಯಿತಿ ನೀಡುವ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿ ಗಳಿಂದ ವರದಿ ಕೇಳಿದ್ದು, ಉಡುಪಿ ಜಿಲ್ಲಾಧಿಕಾರಿ ಸಮುದಾಯಕ್ಕೆ ಅನುಕೂಲ ವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಶನ್ ಅಧ್ಯಕ್ಷ ಹ್ಯಾರಿ ಡಿಸೋಜಾ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆ ನಡೆಯುವ ಎ.18ರಂದು ಕ್ರೈಸ್ತ ಸಮುದಾಯ ಬಹತೇಕ ಮಂದಿ ಉಪವಾಸ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ದೂರದ ಊರಿಗೆ ಕರ್ತವ್ಯಕ್ಕೆ ನಿಯೋಜಿಸಿ ದರೆ ತೊಂದರೆಯಾಗುವ ಕಾರಣ ವಿನಾಯತಿ ನೀಡಲು ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದರು.
ಅಲ್ಲದೇ ಜಿಲ್ಲೆಯಲ್ಲಿ ಕ್ರೈಸ್ತ ಸಂಸ್ಥೆಗಳಿಗೆ ಸೇರಿದ ವಿದ್ಯಾಸಂಸ್ಥೆಗಳು ಇಗರ್ಜಿಗಳಿಗೆ ಸಮೀಪದಲ್ಲಿರುವುದರಿಂದ ಈ ಶಾಲೆಗಳಲ್ಲಿರುವ ಮತಕಟ್ಟೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಾಗುವುದರಿಂದ ಧಾರ್ಮಿಕ ಆಚರಣೆಗೆ ತೊಂದರೆಗಳಾಗಲಿವೆ. ಹೀಗಾಗಿ ಚರ್ಚ್ ಆವರಣದಲ್ಲಿರುವ ಮತಗಟ್ಟೆ ಸ್ಥಳಾಂತರಕ್ಕೂ ಮನವಿ ಮಾಡಲಾಗಿದೆ ಎಂದರು.
ಕೆಥೋಲಿಕ್ ಸಭಾ ನಿಯೋಜಿತ ಅಧ್ಯಕ್ಷೆ ಮೇರಿ ಡಿಸೋಜಾ, ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಕಾರ್ಯದರ್ಶಿ ಮ್ಯಾಕ್ಸಿಂ ಡಿಸೋಜಾ ಉಪಸ್ಥಿತರಿದ್ದರು.