‘ಮೀನುಗಾರರ ನಾಪತ್ತೆ ಪ್ರಕರಣ: ರಾಜಕೀಯ ದುರ್ಬಳಕೆ ಬೇಡ’
ಉಡುಪಿ, ಎ.4: ಮಲ್ಪೆಯ ಇಬ್ಬರು ಸೇರಿದಂತೆ ಒಟ್ಟು ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣವನ್ನು ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ದುರ್ಬಳಕೆ ಮಾಡಿಕೊಳ್ಳದಂತೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ವಿಷಯದ ಬಗ್ಗೆ ಯಾರು, ಏನು, ಎಷ್ಟು ಕೆಲಸ ಮಾಡಿದ್ದಾರೆ ಎಂದು ಮೀನುಗಾರರಾದ ನಮಗೆ ಗೊತ್ತಿದೆ. ರಾಜಕೀಯ ವ್ಯಕ್ತಿಗಳು ತಮ್ಮ ತಮ್ಮ ಲಾಭಕ್ಕೋಸ್ಕರ ರಾಜ್ಯ ಸರಕಾರದ ಬಗ್ಗೆಯಾಗಲೀ, ಕೇಂದ್ರ ಸರಕಾರದ ಬಗ್ಗೆಯಾಗಲೀ ಕೆಲಸ ಮಾಡಿಲ್ಲವೆಂದು ಗೂಬೆ ಕೂರಿಸುವ ಕೆಲಸ ಮಾಡಿ, ಪ್ರತಿ ದಿನ ತಮ್ಮವರನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿರುವ ಕುಟುಂಬಗಳಿಗೆ ಪದೇ ಪದೇ ನೋವು ತರುವ ಕೆಲಸ ಮಾಡಬಾರದೆಂದು ಅವರು ಮನವಿ ಮಾಡಿದ್ದಾರೆ.
ನಿಮಗೇನಾದರೂ ನಾಪತ್ತೆಯಾದ ಬೋಟು ಹಾಗೂ ಕಾಣೆಯಾದ ಮೀನುಗಾರರ ಬಗ್ಗೆ ಕಾಳಜಿ ಇರುವುದೇ ಆದಲ್ಲಿ ಚುನಾವಣೆ ಮುಗಿದ ಬಳಿಕ ಮೀನುಗಾರರೊಂದಿಗೆ ಕೈಜೋಡಿಸಿ ನಿಮ್ಮ ಸಲಹೆ-ಸೂಚನೆಗಳನ್ನು ಕೊಟ್ಟು ಕಾಣೆಯಾದ ಬೋಟು ಮತ್ತು ನಾಪತ್ತೆಯಾದ ಮೀನುಗಾರರನ್ನು ಹುಡುಕಲು ಸಹಕರಿಸುವಂತೆ ಸತೀಶ್ ಕುಂದರ್ ಮನವಿಯಲ್ಲಿ ವಿನಂತಿಸಿದ್ದಾರೆ.