ಸ್ಮಾರ್ಟ್ಸಿಟಿ: ಅಂತರ್ ಇಲಾಖೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಕಾಮಗಾರಿ ಪ್ರಗತಿ ವರದಿ ಸಲ್ಲಿಕೆಗೆ ಡಿಸಿ ಸೂಚನೆ
ಮಂಗಳೂರು, ಎ.4: ಸ್ಮಾರ್ಟ್ಸಿಟಿ ಯೋಜನೆಯಡಿ ಮಂಗಳೂರು ನಗರವನ್ನು ಸ್ಮಾರ್ಟ್ ಆಗಿ ಅಭಿವೃದ್ಧಿಪಡಿಸಲು ಕೈಗೊಂಡ ಕಾಮಗಾರಿ ಹಾಗೂ ಅವುಗಳ ಪ್ರಗತಿಯನ್ನು ತಿಂಗಳ ಪ್ರತೀ ಶನಿವಾರ ‘ಪಿಪಿಟಿ’ಯಲ್ಲಿ ‘ಗೂಗಲ್ ಮ್ಯಾಪ್’ ಫೋಟೋಗಳ ಮೂಲಕ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದರು.
ನಗರದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗುರುವಾರ ಸ್ಮಾರ್ಟ್ಸಿಟಿ ಯೋಜನೆಯಡಿ ಅಂತರ್ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಪರಿಶೀಲನೆಗೆ ಕೈಗೊಂಡ ಯೋಜನೆಗಳ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಮಹಾನಗರಪಾಲಿಕೆ, ಲೋಕೋಪಯೋಗಿ ಇಲಾಖೆಗಳನ್ನೊಳಗೊಂಡಂತೆ ಹಲವು ಇಲಾಖೆಗಳು ವಿವಿಧ ಏಜೆನ್ಸಿ ಮುಖಾಂತರ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಇಲಾಖೆಗಳ ನಡುವೆ ಸಮನ್ವಯತೆ ಕೊರತೆಯಿಂದ ಬಹಳಷ್ಟು ಕಾಮಗಾರಿಗಳು ಪುನಾರವರ್ತನೆಯಾಗುತ್ತಿರುವುದಾಗಿ ಜಿಲ್ಲೆಯ ಜನತೆ ಹೇಳುತ್ತಿದ್ದಾರೆ ಎಂದರು.
ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ವೇಳೆ ಸಮನ್ವಯತೆ ಹಾಗೂ ಸಮಯ ಮಿತಿಯೊಳಗೆ ಕಾಮಗಾರಿ ನಡೆಸಲು ಇಚ್ಛಾಶಕ್ತಿ ಹೊಂದಿರುವ ಸಮಿತಿಯ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಬಿಎಸ್ಸೆನ್ನೆಲ್, ಮೆಸ್ಕಾಂ, ರೈಲ್ವೇಸ್, ಪೊಲೀಸ್ ಇಲಾಖೆಯವರು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ಸ್ಥಳೀಯ ಜನರ ಅಗತ್ಯಗಳನ್ನು ಗುರುತಿಸಿ ಕಾಮಗಾರಿಗಳಿಗೆ ಮಾನದಂಡಗಳನ್ನು ನಿಗದಿಪಡಿಸಬೇಕು. ಸಮನ್ವಯದಿಂದ, ಯೋಜನಾಬದ್ಧವಾಗಿ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು ಎಂದು ನಿರ್ದೇಶನ ನೀಡಿದರು.
ಕಾಮಗಾರಿ ಪ್ರಗತಿ ಪರಿಶೀಲನೆಗೆ ಪೂರಕವಾಗಿ ತಾಂತ್ರಿಕ ಅಧಿಕಾರಿಗಳ ವೇದಿಕೆಯೊಂದನ್ನು ರಚಿಸಿ ಪ್ರತಿ ತಿಂಗಳ ಮೊದಲನೇ ಶನಿವಾರ ಪ್ರಗತಿ ಪರಿಶೀಲನೆ ಸಭೆ ಪಿಪಿಟಿಯಲ್ಲಿ ಗೂಗಲ್ ಮ್ಯಾಪ್ ಮೂಲಕ ನೈಜ ಅಭಿವೃದ್ಧಿ ನಕ್ಷೆಯನ್ನು ತೋರಿಸಿ ಪ್ರಗತಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದರು.
ಸ್ಮಾರ್ಟ್ಸಿಟಿ ಅಂತರ್ ಇಲಾಖೆ ಸಭೆಗಳು ‘ನಾಮ್ ಕೆ ವಾಸ್ತೆ’ ಸಭೆಯಾಗದೆ ಪ್ರತಿ ತಿಂಗಳು ಅಭಿವೃದ್ಧಿಯಾದ ನಿಖರ ಮಾಹಿತಿಗಳಿರಬೇಕು. ಯೋಜನೆಗಳ ಅನುಕೂಲದ ಬಗ್ಗೆ ಜನರಿಗೆ ತಿಳಿಸಿದರೆ ಜನತೆ ಖಂಡಿತಾ ಸಹಕಾರ ನೀಡುತ್ತಾರೆ ಎಂದರು.
ನಗರದೊಳಗೆ ಹಾಗೂ ಅವಕಾಶವಿದ್ದಲ್ಲಿ ನಗರದ ಹೊರಗೆ ಮಂಗಳೂರು ವಿಶ್ವವಿದ್ಯಾಲಯಗಳವರೆಗೂ ಸೋಲಾರ್ ಅಳವಡಿಕೆಗೆ ಯೋಜನೆಗಳನ್ನು ರೂಪಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು.