ಪ್ರಧಾನಿ ಮೋದಿಯಿಂದ ದ್ವೇಷದ ರಾಜಕಾರಣ: ವಿ.ಆರ್.ಸುದರ್ಶನ
ಮಂಗಳೂರು, ಎ. 5: ಪ್ರಧಾನಿ ನರೇಂದ್ರ ಮೋದಿ ದ್ವೇಷದ ರಾಜಕಾರಣದಲ್ಲಿ ತೊಡಗಿದುದರ ಪರಿಣಾಮ ದೇಶಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ‘ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ’ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಉತ್ತಮ ಆಡಳಿತ ನೀಡುತ್ತೇವೆ ಎಂದ ಬಿಜೆಪಿ ಕಳೆದ ಐದು ವರ್ಷದಲ್ಲಿ ಏನೇನೂ ಮಾಡಿಲ್ಲ. ನ್ಯೂ ಇಂಡಿಯಾ ಹೆಸರಿನಲ್ಲಿ ದ್ವೇಷ ಮತ್ತು ಆತಂಕದ ವಾತಾವರಣ ಸೃಷ್ಟಿಸಿದ್ದೇ ಬಿಜೆಪಿ ಸರಕಾರದ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದ ವಿ.ಆರ್.ಸುದರ್ಶನ ರೈತರ ಸಾಲ ಮನ್ನಾ ವಿಷಯದಲ್ಲೂ ಮೋದಿ ನೇತೃತ್ವದ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲ. ನ್ಯಾಯಾಂಗವನ್ನು ದುರುಪಯೋಗ ಮಾಡಿದ, ಸುಪ್ರೀಂ ಕೋರ್ಟ್ನಿಂದ ಛೀಮಾರಿಗೊಳಗಾದ, ನೋಟು ಅಮಾನ್ಯಗೊಳಿಸಿದ ಕುಖ್ಯಾತಿ ಮೋದಿ ಸರಕಾರದ್ದಾಗಿದೆ ಎಂದರು.
ರಾಜಕೀಯ ಪಕ್ಷಗಳ ಅಜೆಂಡಾ ಏನೇ ಇದ್ದರೂ ಕೂಡಾ ಸರಕಾರಗಳ ಉದ್ದೇಶ ಉತ್ತಮ ಆಡಳಿತ ನೀಡುವಂತಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರ ಆಡಳಿತ ನಡೆಸುವಾಗ ಸಮನ್ವಯ ಸಾಧಿಸುವಂತಹ ಹೊಣೆ ಕೇಂದ್ರದ್ದಾಗಿದೆ. ಆದರೆ ಮೋದಿ ಸರಕಾರವು ಮಲತಾಯಿ ಧೋರಣೆ ತಾಳಿ ಆಡಳಿತ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಎಂದು ವಿ.ಆರ್. ಸುದರ್ಶನ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಚುನಾವಣಾ ಉಸ್ತುವಾರಿ ರಮಾನಾಥ ರೈ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಪಕ್ಷದ ಜಿಲ್ಲಾ ವಕ್ತಾರ ಎ.ಸಿ.ವಿನಯರಾಜ್, ಸಂತೋಷ್ ಶೆಟ್ಟಿ, ಸದಾಶಿವ ಉಳ್ಳಾಲ ಉಪಸ್ಥಿತರಿದ್ದರು.