ವಿಜಯಾ ಬ್ಯಾಂಕ್ ವಿಲೀನ ಸರ್ವಾಧಿಕಾರಿ ಧೋರಣೆ: ನಿವೃತ್ತ ಆಡಳಿತ ನಿರ್ದೇಶಕ ಸುಬ್ಬಯ್ಯ ಶೆಟ್ಟಿ
ಮಂಗಳೂರು, ಎ. 5: ಲಾಭದಲ್ಲಿದ್ದ ವಿಜಯಾ ಬ್ಯಾಂಕನ್ನು ನಷ್ಟದಲ್ಲಿದ್ದ ಬ್ಯಾಂಕ್ಗಳ ಜತೆ ವಿಲೀನ ಮಾಡುವ ಕ್ರಮವು ಬ್ಯಾಂಕಿಂಗ್ ವ್ಯವಸ್ಥೆಯನ್ನು ದೃಢಪಡಿಸುವ ಯೋಜನೆ ಹೊಂದಿಲ್ಲ. ಬದಲಾಗಿ ಇದು ಸರ್ವಾಧಿಕಾರಿ ಧೋರಣೆ ಎಂದು ವಿಜಯಾ ಹೌಸಿಂಗ್ ಬ್ಯಾಂಕ್ನ ಆಡಳಿತ ನಿರ್ದೇಶಕರಾಗಿದ್ದ ಸುಬ್ಬಯ್ಯ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ವಿಜಯಾ ಬ್ಯಾಂಕ್ ವಿಲೀನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಆರೆಸ್ಸೆಸ್ ಕಟ್ಟಾ ಅನುಯಾಯಿಯಾಗಿದ್ದ ತಾನು ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಜೈಲಿಗೆ ಹೋಗಲೂ ಭಯ ಪಡದೆ ಬ್ಯಾಂಕ್ನ ಹಿರಿಯರಾದ ಸುಂದರರಾಮ ಶೆಟ್ಟರ ಜತೆ ಬ್ಯಾಂಕಿನ ಅಭಿವೃದ್ದಿಗೆ ಶ್ರಮಿಸಿದ್ದೆ ಎಂದರು.
ಕೇವಲ ಮೂರು ತಾಸಿನಲ್ಲಿ ರಾಷ್ಟ್ರೀಕೃತ ಬ್ಯಾಂಕನ್ನು ನಷ್ಟದಲ್ಲಿರುವ ಬ್ಯಾಂಕ್ ಜತೆ ವಿಲನಗೊಳಿಸುವ ತರಾತುರಿಯ ನಿರ್ಧಾರ ವಂಚಕ ಉದ್ಯಮಿಗಳನ್ನು ಕಾಪಾಡುವುದಕ್ಕೆ ಮಾತ್ರವಾಗಿದೆ. ಕಳೆದ ಮೂರು ವರ್ಷಗಳಿಂದ ಯಾವುದೇ ಬ್ಯಾಂಕಿನ ಬೋರ್ಡ್ಗೆ ಅಧಿಕಾರಿ ಮತ್ತು ನೌಕರರ ಪ್ರತಿನಿಧಿಗಳನ್ನು ನೇಮಕ ಮಾಡದೆ ಇರುವುದು ಈ ದೇಶದಲ್ಲಿ ಚರ್ಚೆಯೇ ಆಗಿರುವುದಿಲ್ಲ. ಇದು ಸರ್ವಾಧಿಕಾರಿ ಧೋರಣೆ ಎಂದು ಅವರು ಹೇಳಿದರು.
ಬಿಜೆಪಿ ಹಾಗೂ ಆರೆಸ್ಸೆಸ್ ನ ಬೆಳವಣಿಗೆಯಲ್ಲಿ ಬ್ಯಾಂಕ್ನ ಪಾತ್ರ ಮಹತ್ತರವಾದುದು. ಪ್ರಭಾಕರ ಕಲ್ಲಡ್ಕ ಭಟ್ಟರು ಶಾಲೆ ಆರಂಭಿಸುವ ಸಂದರ್ಭ ಶಾಲೆಗಾಗಿ ದೇಣಿಗೆಯ ಸಹಾಯ ಕೋರಿದ್ದರು. ಆ ಸಂದರ್ಭದಲ್ಲಿ ಸ್ಮರಣ ಸಂಚಿಕೆಗೆ ಜಾಹೀರಾತು ರೂಪದಲ್ಲಿ ಹಣ ಸಂಗ್ರಹಿಸಿ ಎಂಟು ಲಕ್ಷ ರೂ.ಗಳನ್ನು ಅಂದು ಶಾಲೆಗಾಗಿ ನೀಡಿದ್ದೆ ಎಂದು ಸುಬ್ಬಯ್ಯ ಶೆಟ್ಟಿ ಹೇಳಿದರು.
ಗೋಷ್ಠಿಯಲ್ಲಿ ವಿಜಯಾ ಬ್ಯಾಂಕ್ನ ನಿವೃತ್ತ ಉದ್ಯೋಗಿ ನಾರಾಯಣ ಸಾಲಿಯಾನ್, ಗ್ರಾಹಕ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.
ಕರಾವಳಿಯ ಸಮುದಾಯದ ಸಂಸದ, ಶಾಸಕರಿಗೂ ತಾಕತ್ತಿಲ್ಲದಾಯಿತು!
ಬಂಟ ಸಮುದಾಯದವರು ಮನೆಮನೆಯಿಂದ ಹಣ ತಂದು ಹುಟ್ಟಿಕೊಂಡ ಈ ಬ್ಯಾಂಕು ಕರಾವಳಿಯ ಹೆಮ್ಮೆಯ ಪ್ರತೀಕವಾಗಿತ್ತು. ಆದರೆ ಕರಾವಳಿಯಲ್ಲಿ ಸಮುದಾಯದ ಸಂಸದರು, ನಾಲ್ಕು ಮಂದಿ ಶಾಸಕರಿದ್ದರೂ ಅವರಿಂದ ಇದನ್ನು ಉಳಿಸಿಕೊಳ್ಳಲಾಗದಿರುವುದು ಬೇಸರದ ತಂದಿದೆ. ನಾನು ಈ ಬಗ್ಗೆ ಕನಿಷ್ಠ ಕೇಂದ್ರದ ಹಣಕಾಸು ಸಚಿವರಲ್ಲಾದರೂ ಮಾತನಾಡಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಹಲವರಲ್ಲಿ ಕೇಳಿಕೊಂಡರೂ ನನಗೆ ಅವಕಾಶ ದೊರೆಯಲಿಲ್ಲ. ಇಲ್ಲಿನ ಸಂಸದರು, ಶಾಸಕರಿಗೆ ಪ್ರಧಾನಿ ಜತೆ ಈ ಬಗ್ಗೆ ಮಾತನಾಡುವ ತಾಕತ್ತೂ ಇಲ್ಲದಾಯಿತು ಎಂದು 79ರ ಹರೆಯದ ಸುಬ್ಬಯ್ಯ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
‘‘ಇಂದು ಸಮಾಜದಲ್ಲಿ ಸೇವೆ ಮಾಡುವವರಿಗೆ ಬೆಲೆ ಇಲ್ಲವಾಗಿದೆ. ಬಿಜೆಪಿಯಲ್ಲಿ ಅಡ್ವಾಣಿಯವರನ್ನೂ ಮೂಲೆಗುಂಪು ಮಾಡಲಾಗಿದೆ. ಪ್ರಧಾನಿ ಎದುರು ನಿಂತು ಮಾತನಾಡುವ ಧೈರ್ಯ ನಮ್ಮ ಸಂಸದರು, ಶಾಸಕರಿಗೆ ಇಲ್ಲವಾಗಿದೆ. ಇರುತ್ತಿದ್ದರೆ ಕನಿಷ್ಠ ಹಣಕಾಸು ಸಚಿವರಲ್ಲಾದರೂ ಧ್ವನಿ ಎತ್ತಿ ನಮ್ಮ ಕರಾವಳಿಯ ಹೆಮ್ಮೆಯ ಪ್ರತೀಕವಾದ ವಿಜಯಾ ಬ್ಯಾಂಕನ್ನು ಉಳಿಸಿಕೊಳ್ಳಬಹುದಿತ್ತು.
ಆರೆಸ್ಸೆಸ್ ನ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿದ್ದ ಕಾರಣ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಜೈಲು ಸೇರಿದ್ದರೂ ಬ್ಯಾಂಕ್ ಅಭಿವೃದ್ದಿಗೆ ಶ್ರಮಿಸಿದ್ದೆ. ನಾವು ಅಂದು ಮಾಡಿದ ತ್ಯಾಗ, ಬಲಿದಾನದಿಂದ ಆರೆಸ್ಸೆಸ್ ಹಾಗೂ ಬಿಜೆಪಿ ಬೆಳೆಯಲು ಕಾರಣವಾಗಿದೆ. ಇದರಲ್ಲಿ ವಿಜಯಾ ಬ್ಯಾಂಕ್ನ ಕೊಡುಗೆಯೂ ಅಪಾರ. ಇಂದು ಸತ್ಯಕ್ಕೆ ಬೆಲೆ ಇಲ್ಲವಾಗಿದೆ. ಆರೆಸ್ಸೆಸ್ ಎಂದರೆ ಈಗ ಕೈಗೊಂದು ಹಗ್ಗ, ಕುತ್ತಿಗೆಗೊಂದು ಶಾಲು ಮಾತ್ರ. ತ್ಯಾಗ ಬಲಿದಾನಗಳಿಗೆ ಬೆಲೆ ಇಲ್ಲ’’.
- ಸುಬ್ಬಯ್ಯ ಶೆಟ್ಟಿ, ವಿಜಯಾ ಹೌಸಿಂಗ್ ಬ್ಯಾಂಕ್ ನಿವೃತ್ತ ಆಡಳಿತ ನಿರ್ದೇಶಕ