ಶ್ರೀನಿವಾಸ ವಿವಿಯಲ್ಲಿ ‘ಕಲಾಸ್ಪಂದನ’ ಉದ್ಘಾಟನೆ
ಮಂಗಳೂರು, ಎ.5: ನಗರ ಹೊರವಲಯದ ಮುಕ್ಕದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಸಾಂಸ್ಕೃತಿಕ ಕಲರವ ಕಲಾಸ್ಪಂದನ-19 ಕಾರ್ಯಕ್ರಮವು ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಭಾರತೀಯ ಭೂಸೇನೆಯ 4 ಕರ್ನಾಟಕ ಇಂಜಿನಿಯರ್ ಕಂಪೆನಿಯ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಕರ್ನಲ್ ವೇಣು ರಮಣ್ ಹಾಗೂ ಕಾಟಿಪಳ್ಳ ಚರ್ಚ್ನ ಧರ್ಮಗುರು ಫಾ. ಆಂಡ್ರ್ಯೂಸ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಪ್ರತಿಯೋರ್ವ ವಿದ್ಯಾರ್ಥಿಯೂ ಮಾನವೀಯ ಮೌಲ್ಯಗಳನ್ನು ಅರಿತುಕೊಂಡು ದೇಶದ ಉತ್ತಮ ಪ್ರಜೆಯಾಗಿ, ಸಮಾಜಕ್ಕೆ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ದೇಶದ ರಕ್ಷಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಪ್ರಾಮುಖ್ಯತೆ, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಪರಿಸ್ಥಿತಿಯ ನಿಭಾವಣೆ, ಪ್ರತಿಕೂಲ ಹವಾಮಾನ ವೈಪರಿತ್ಯಗಳು, ಗಡಿ ಹಾಗೂ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಲ್ಲಿ ಎದುರಾಗುವ ಸವಾಲುಗಳು ಹಾಗೂ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಇಂಜಿನಿಯರಿಂಗ್ ಪದವೀಧರರ ಸೇವಾ ಅವಶ್ಯಕತೆಯ ಬಗ್ಗೆ ಮಾತನಾಡಿದರು.
ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಮುಖ್ಯಸ್ಥ ಡಾ.ಬಿ.ಶ್ರೀಪ್ರಕಾಶ್, ಉಪಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗಡೆ ಮತ್ತು ಕಲಾಸ್ಪಂದನ-19ರ ಸಂಚಾಲಕ ಉಮಾ ಶ್ರೀಕರ್ ಉಪಸ್ಥಿತರಿದ್ದರು.
ಉಮಾ ಶ್ರೀಕರ್ ಸ್ವಾಗತಿಸಿದರು. ಡಾ. ರಾಮಕೃಷ್ಣ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ.ಕೆ.ಶ್ರೀನಾಥ್ ರಾವ್ ಮತ್ತು ಪ್ರೊ.ವಿಕಾಸ್ ರೈ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ರಾಜೇಶ್ವರಿ ಕಲಾಸ್ಪಂದನ ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರ ವಿವರ ನೀಡಿದರು.
ಕಾಲೇಜಿನ ಸಮನ್ವಯಕಾರ ಡಾ. ಪ್ರವೀಣ್ ಬಿ.ಎಂ. ವಂದಿಸಿದರು. ವಿದ್ಯಾರ್ಥಿನಿಯರಾದ ಡೆಲಿಷಾ ಡಿಸೋಜ ಮತ್ತು ಪೃಥ್ವಿಶಾ ಕಾರ್ಯಕ್ರಮ ನಿರೂಪಿಸಿದರು.