ಕ್ಯಾಂಪ್ಕೊದಲ್ಲಿ 100ನೇ ಸ್ವಚ್ಛತಾ ಸಂಪರ್ಕ ಅಭಿಯಾನ
ಮಂಗಳೂರು, ಎ.5: ರಾಮಕೃಷ್ಣ ಮಿಶನ್ನ 100ನೆ ಸ್ವಚ್ಛತಾ ಸಂಪರ್ಕ ಅಭಿಯಾನವು ಬುಧವಾರ ಕ್ಯಾಂಪ್ಕೋ ಕೇಂದ್ರ ಕಚೇರಿಯಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಮಕೃಷ್ಣ ಮಿಷನ್ನ ಸ್ವಾಮೀಜಿ ಏಕಗಮ್ಯಾನಂದಜೀ ‘ನಮಗೆ ಸ್ವಚ್ಛತೆಯ ಅರಿವಿನೊಂದಿಗೆ ತ್ಯಾಜ್ಯ ನಿರ್ವಹಣೆಯ ಅರಿವಿನ ಕೊರತೆಯೂ ಇದೆ. ಸ್ವಚ್ಛತೆಯ ಹೆಸರಿನಲ್ಲಿ ಕಸವನ್ನು ಸಂಗ್ರಹಿಸಿ ಕೊಡುತ್ತೇವೆ. ಕಸವು ಕೇಂದ್ರೀಕೃತವಾಗಿ ಊರ ಹೊರಗಿನ ನೂರಾರು ಎಕರೆ ಪ್ರದೇಶದಲ್ಲಿ ಸುರಿಯಲ್ಪಟ್ಟು ನೆಲ-ಜಲವನ್ನು ಕಲುಷಿತಗೊಳಿಸಿ ವ್ಯಾಪಕವಾಗಿ ಪರಿಸರ ಹಾನಿಗೆ ಕಾರಣವಾಗುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ಹಸಿಕಸ ನಿರ್ವಹಣೆಗೆ ಮೂರು ಮಡಕೆಯ ವಿಧಾನ -ಮಡಕೆ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ಅಭಿಯಾನದ ಕಾರ್ಯಕರ್ತ ಸಚಿನ್ ನಡೆಸಿಕೊಟ್ಟರು. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಕ್ಯಾಂಪ್ಕೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ., ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಚಾಲಕ ಉಮಾನಾಥ್ ಕೋಟೆಕಾರ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ವಿಶ್ವಕರ್ಮ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಹರೀಶ್ ಆಚಾರ್ ಉಪಸ್ಥಿತರಿದ್ದರು. ಅರುಣಾ ಆರ್. ಶೆಟ್ಟಿ ವಂದಿಸಿದರು. ಟಿ.ಎಸ್. ಭಟ್ ಕಾರ್ಯಕ್ರಮ ನಿರೂಪಿಸಿದರು.