ಕುಂದಾಪುರ: ಹೆಸ್ಕುತ್ತೂರಿನಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ
ಕುಂದಾಪುರ, ಎ. 5: ಕೊರ್ಗಿ ಸಮೀಪದ ಹೆಸ್ಕುತ್ತೂರು ಪರಿಸರದಲ್ಲಿ ಕಳೆದ ಮೂರು ದಿನಗಳಿಂದ ಆತಂಕ ಸೃಷ್ಠಿಸಿದ್ದ ಚಿರತೆಯೊಂದನ್ನು ಬೋನಿನ ಮೂಲಕ ಶುಕ್ರವಾರ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.
ಮೂರು ದಿನಗಳ ಹಿಂದೆ ಹೆಸ್ಕುತ್ತೂರಿನ ಪೋಸ್ಟ್ ಮಾಸ್ಟರ್ ಶಂಕರ್ ಶೆಟ್ಟಿ ಎಂಬವರ ಮನೆಯ ಕೊಟ್ಟಿಗೆಯೊಳಗೆ ನುಗ್ಗಿದ ಚಿರತೆಯೊಂದು ದನವೊಂದರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಇದರಿಂದ ಆತಂಕ್ಕೆ ಒಳಗಾಗಿದ್ದ ಶಂಕರ್ ಶೆಟ್ಟಿ ಮನೆಯವರು ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು.
ಅದರಂತೆ ಎ.3ರಂದು ಕುಂದಾಪುರ ವಲಯ ಅರಣ್ಯ ಇಲಾಖೆಯವರು ಶಂಕರ್ ಶೆಟ್ಟಿ ಮನೆ ಸಮೀಪ ನಾಯಿ ಸಹಿತ ಬೋನನ್ನು ಇರಿಸಿದ್ದರು. ಎ.4 ರಂದು ನಸುಕಿನ ವೇಳೆ ಬೇಟೆಗಾಗಿ ಶಂಕರ್ ಶೆಟ್ಟಿ ಮನೆ ಸಮೀಪಕ್ಕೆ ಬಂದ ಚಿರತೆಯು ಬೋನಿನೊಳಗೆ ಇದ್ದ ನಾಯಿಯ್ನು ಹಿಡಿಯಲು ಹೋಗಿ ಸೆರೆ ಯಾಯಿತು.
ಇದನ್ನು ತಿಳಿದ ಮನೆಯವರು ಕೂಡಲೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಬೋನು ಸಹಿತ ಸಾಗಿಸಿದರು.
ಚಿರತೆ ಆರೋಗ್ಯವಂತವಾಗಿದ್ದು, ಸುಮಾರು 5-6 ವರ್ಷದ ಗಂಡು ಚಿರತೆ ಇದಾಗಿದೆ. ಇದನ್ನು ಸುರಕ್ಷಿತವಾಗಿ ಕೊಲ್ಲೂರು ಅಭಯಾರಣ್ಯದಲ್ಲಿ ಬಿಡಲಾಗಿದೆ. ಇದೇ ರೀತಿ ಚಿರತೆ ಇರುವ ಬಗ್ಗೆ ಹಲವು ಕಡೆಗಳಲ್ಲಿ ದೂರುಗಳು ಬರುತ್ತಿದ್ದು, ಸದ್ಯ ಉಳ್ತೂರು ಮತ್ತು ಕೋಟೇಶ್ವರ ಸಮೀಪದ ಕಟ್ಕೇರಿ ಎಂಬಲ್ಲಿ ಎರಡು ಬೋನುಗಳನ್ನು ಇರಿಸಲಾಗಿದೆ ಎಂದು ಕುಂದಾಪುರ ವಲಯ ಅರಣ್ಯಾ ಧಿಕಾರಿ ಪ್ರಭಾಕರ್ ಕುಲಾಲ್ ತಿಳಿಸಿದ್ದಾರೆ.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹಾಗೂ ಎಸಿಎಫ್ ಲೋಹಿತ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಉಪ ವಲಯ ಅರಣ್ಯಾಧಿಕಾರಿ ಉದಯ್ , ಅರಣ್ಯ ರಕ್ಷಕರಾದ ಶಂಕರ್ ಖಾರ್ವಿ, ವಿ.ಮಂಜು, ಅರಣ್ಯ ವೀಕ್ಷಕ ಸೋಮಶೇಖರ್, ಚಾಲಕ ಅಶೋಕ್ ಈ ಕಾರ್ಯಾಚರಣೆ ನಡೆಸಿದ್ದಾರೆ.