ಮೋದಿ ಸರಕಾರದಿಂದ ಅಸಂಘಟಿತ ಕಾರ್ಮಿಕರ ಮರಣ ಶಾಸನ: ಸಿಪಿಎಂ
ಉಡುಪಿ, ಎ.5: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಅಸಂಘಟಿತ ಕಾರ್ಮಿಕರಿಗೆ ಹಲವಾರು ಸೌಲಭ್ಯ ನೀಡಿದೆ ಹಾಗೂ ಶೋಭಾ ಕರಂದ್ಲಾಜೆ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ನಿರಂತರವಾಗಿ ಶ್ರಮಿಸಿದ್ದಾರೆ ಎಂಬ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹಾಗೂ ಸಿಐಟಿಯು ರಾಜ್ಯ ಕಾಯ ದರ್ರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಅಂಗನವಾಡಿ ನೌಕರರು ಸೇರಿದಂತೆ ವಿವಿಧ ಸರಕಾರಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಸರಕಾರಿ ನೌಕರರೆಂದು ಪರಿಗಣಿಸಲು ಪ್ರಧಾನಮಂತ್ರಿ ಗಳೇ ಭಾಗವಹಿಸಿದ್ದ ಭಾರತ ಕಾರ್ಮಿಕ ಸಮ್ಮೇಳನದಲ್ಲಿ ತೀರ್ಮಾನ ಆಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿಯವರ ಸರಕಾರ 9 ಕಾಯಿದೆಗಳನ್ನು ಸೇರಿಸಿ, ಒಂದೇ ಕಾನೂನು ಮಾಡುವ ಹೆಸರಿನಲ್ಲಿ ಕಟ್ಟಡ ಕಾರ್ಮಿಕರಿಗೆ ಸವಲತ್ತುಗಳು ಸಿಗದಂತೆ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಮೋದಿಯವರ ಸರಕಾರವು ಅಸಂಘಟಿತ ಕಾರ್ಮಿಕರ ಮರಣ ಶಾಸನ ವನ್ನು ಬರೆಯುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡುವುದರ ಬದಲಾಗಿ ದೊಡ್ಡ ಉದ್ದಿಮೆದಾರರಿಗೆ ಸಹಾಯ ಮಾಡುತ್ತಿದೆ. ಇಂತಹ ಸರಕಾರವನ್ನು ಕಿತ್ತೊಗೆಯಲು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರನ್ನು ಸೋಲಿಸಬೇಕು ಎಂದು ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.