ಹೂಡೆಯ ಸಾಲಿಹಾತ್ನಲ್ಲಿ ಮತಯಂತ್ರ ಪ್ರಾತ್ಯಕ್ಷಿಕೆ
ಉಡುಪಿ, ಎ.5: ತೋನ್ಸೆ ಹೂಡೆಯ ಸಾಲಿಹಾತ್ ಮಹಿಳಾ ಪದವಿ ಕಾಲೇಜು, ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಗಳ ಜಂಟಿ ಆಶ್ರಯದಲ್ಲಿ ವಿದ್ಯುನ್ಮಾನ ಮತಯಂತ್ರ ಪ್ರಾತ್ಯಕ್ಷಿಕೆಯು ಇತ್ತೀಚೆಗೆ ಸಾಲಿಹಾತ್ ಕಾಲೇಜಿನಲ್ಲಿ ಜರಗಿತು.
ಉಡುಪಿ ತಾಪಂ ಇಲಾಖೆಯ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಪ್ರಮುಖ ಕಾರ್ಯ, ತಮ್ಮ ತಮ್ಮ ಆತ್ಮ ಸಾಕ್ಷಿಯಾಗಿ ಮತ ಚಲಾಯಿಸಬೇಕು, ಇತರರಿಗೂ ಮತದಾನ ಮಾಡುವಲ್ಲಿ ಪ್ರೇರೇಪಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಲ್ಯಾಣಪುರ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುರೇಶ್ ಮತ ಯಂತ್ರ ಪ್ರಾತ್ಯಕ್ಷಿಕೆ ನೀಡಿದರು. ಕೆಮ್ಮಣ್ಣು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾಲತಿ ಮತಯಂತ್ರ ಪಾತ್ಯಕ್ಷಿಕೆಗೆ ಸಹಾಯಕರಾಗಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಸಬೀನಾ, ಮುಖ್ಯ ಶಿಕ್ಷಕರಾದ ಸುನಂದಾ, ಲವಿನಾ ಕ್ಲಾರಾ, ಸಮೀನಾ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು.