ಮರೆಯದೆ ಮತದಾನ ಮಾಡಿ: ಸಿಇಒ
ಮತದಾನ ಜಾಗೃತಿ ಪ್ರದರ್ಶನ ಮಳಿಗೆ ಉದ್ಘಾಟನೆ
ಮಂಗಳೂರು, ಎ. 5: ಓದು ವ್ಯಕ್ತಿತ್ವವನ್ನು ರೂಪಿಸಿದರೆ ಮತದಾನ ದೇಶವನ್ನು ರೂಪಿಸುತ್ತದೆ. ಮುಕ್ತ ಹಾಗೂ ನಿರ್ಭೀತ ವಾತಾವರಣವನ್ನು ಕಲ್ಪಿಸಲಾಗಿದ್ದು, ಮರೆಯದೆ ಮತದಾನ ಮಾಡಿ ಎಂದು ಜಿಪಂ ಸಿಇಒ ಹಾಗೂ ಸ್ವೀಪ್ ನೋಡಲ್ ಅಧಿಕಾರಿ ಡಾ.ಆರ್. ಸೆಲ್ವಮಣಿ ಮನವಿ ಮಾಡಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶುಕ್ರವಾರ ಏರ್ಪಡಿಸಿದ ಮತದಾನ ಜಾಗೃತಿ ಪ್ರದರ್ಶನ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಸ್ವೀಪ್ ಸಮಿತಿಯಿಂದ ಎಲ್ಲ ಮತದಾರರನ್ನು ತಲುಪಲು ವಿವಿಧ ರೀತಿಯ ಸ್ಪರ್ಧೆಗಳು, ಜಾಥಾಗಳು, ಬಹುಮಾಧ್ಯಮ ಪ್ರಚಾರಗಳನ್ನು ಮಾಡಲಾಗಿದೆ. ಎ.5ರಿಂದ 8ರವರೆಗೆ ಈ ಪ್ರದರ್ಶನ ನಡೆಯಲಿದೆ. ಮಾಹಿತಿ ಇಲ್ಲದೆ ಜನರು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಹಲವು ಕಾರ್ಯ ಕ್ರಮಗಳನ್ನು ಪ್ರತಿದಿನವೆಂಬಂತೆ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಜೈಶಾಂತ್ ಹಾಗೂ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಸುಧಾಕರ್ ಉಪಸ್ಥಿತರಿದ್ದರು.