ಜ್ಞಾನ, ಅನುಭವಕ್ಕೆ ಅಣಕ ನ್ಯಾಯಾಲಯ ಅತ್ಯಗತ್ಯ: ಡಾ.ಸುಬ್ರಹ್ಮಣ್ಯ
ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ
ಉಡುಪಿ, ಎ.5: ಕಾನೂನನ್ನು ಕಲಿತು ಹೊರಬರುವ ಯುವ ವಕೀಲರಿಗೆ ನ್ಯಾಯಾಲಯದಲ್ಲಿ ಮಾಡುವ ವಾದದ ಕುರಿತ ಜ್ಞಾನ ಹಾಗೂ ಅನುಭವದ ದೃಷ್ಟಿಯಿಂದ ಅಣಕ ನ್ಯಾಯಾಲಯಗಳು ಅತ್ಯಂತ ಮಹತ್ವದ್ದಾಗಿದೆ ಎಂದು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಹಾಗೂ ಪ್ರಸ್ತುತ ಬೆಂಗಳೂರಿನ ಸಿಎಂಆರ್ ವಿವಿಯ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ನ ಡೀನ್ ಪ್ರೊ. (ಡಾ.) ಟಿ.ಆರ್, ಸುಬ್ರಹ್ಮಣ್ಯ ಅಭಿಪ್ರಾಯ ಪಟ್ಟಿದ್ದಾರೆ.
ವೈಕುಂಠ ಬಾಳಿಗಾ ಕಾನೂನು ಕಾಲೇಜು ಹಾಗೂ ಹಳೆವಿದ್ಯಾರ್ಥಿ ಸಂಘಗಳ ಆಶ್ರಯದಲ್ಲಿ ಉಡುಪಿಯ ಜನಪ್ರಿಯ ನ್ಯಾಯವಾದಿಯಾಗಿದ್ದ ದಿ. ಪಿ.ಶಿವಾಜಿ ಶೆಟ್ಟಿ ಸ್ಮರಣಾರ್ಥ 4ನೇ ವರ್ಷದ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಶುಕ್ರವಾರ ಸಂಜೆ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಾಗತೀಕರಣದ ಇಂದಿನ ದಿನಗಳಲ್ಲಿ ಸ್ಪರ್ಧೆ ಎಂಬುದು ಅತ್ಯಂತ ತುರುಸು ಪಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ಇದೆ. ಶೀಘ್ರವೇ ವಿದೇಶಿ ಕಾನೂನು ಫರ್ಮ್ಗಳಿಗೆ ಇಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಕಾನೂನು ಜ್ಞಾನ, ಅನುಭವ, ಗುಣಮಟ್ಟದ ವಾದದ ಮೂಲಕವೇ ಔನತ್ಯ ಸಾಧಿಸಬೇಕಾಗಿದೆ. ಇದಕ್ಕೆ ಇಂಥ ಅಣಕು ನ್ಯಾಯಾಲಯಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಗಂಭೀರವಾಗಿ ಪರಿಗಣಿಸಿ, ಭಾಗವಹಿಸಬೇಕು ಎಂದವರು ನುಡಿದರು.
ಭಾರತದಲ್ಲಿ 1957ರಲ್ಲಿ ಲಾ ಕಮಿಷನ್ ಪ್ರಾರಂಭಗೊಳ್ಳುವಾಗ 20,159 ವಿದ್ಯಾರ್ಥಿಗಳಿದ್ದು 43 ಕಾನೂನು ಕಾಲೇಜುಗಳಿದ್ದವು. ಇಂದು ದೇಶದಲ್ಲಿ 1400 ಕಾನೂನು ಕಾಲೇಜುಗಳಿವೆ. ಇವುಗಳಲ್ಲಿ ಮೂರು ವಿಧಗಳಿವೆ. ದೇಶದ 16 ನೇಷನಲ್ ಸ್ಕೂಲ್ ಆಫ್ ಲಾದಲ್ಲಿ 2600 ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಾನೂನು ಶಿಕ್ಷಣ ದೊರೆಯುತ್ತಿವೆ. ಇನ್ನು ಖಾಸಗಿ ಕಾನೂನು ವಿವಿಗಳಿವೆ. ಅಲ್ಲದೇ ಶೇ.80ರಿಂದ 85ರಷ್ಟಿರುವ ವಿವಿಧ ವಿವಿಗಳಿಗೆ ಸಂಯೋಜಿತಗೊಂಡ ಕಾನೂನು ಕಾಲೇಜುಗಳಲ್ಲಿ ಸಿಗುತ್ತಿರುವ ಶಿಕ್ಷಣ ಉನ್ನತ ಮಟ್ಟದಲ್ಲಿಲ್ಲ ಎಂದು ಹೇಳಲಾಗುತ್ತಿದೆ ಎಂದರು.
ದೇಶದಲ್ಲಿ 1987ರಲ್ಲಿ ಐದು ವರ್ಷಗಳ ಕಾನೂನು ಶಿಕ್ಷಣವನ್ನು ಪ್ರಾರಂಭಿಸ ಲಾಯಿತು. ಪುಸ್ತಕದಲ್ಲಿ ಓದುವ ಕಾನೂನಿಗೂ, ಕಾರ್ಯರೂಪದಲ್ಲಿ ಬರುವ ಕಾನೂನಿಗೂ ವ್ಯತ್ಯಾಸವಿರುವ ಕಾರಣ, ಕ್ಲಿನಿಕಲ್ ಲೀಗಲ್ ಎಜ್ಯುಕೇಷನ್ನ್ನು ಅಳವಡಿಸಲಾಯಿತು. ಇದರಿಂದ ಕಾನೂನು ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಂತೆ ಹೆಚ್ಚೆಚ್ಚು ಪ್ರಾಯೋಗಿಕ ಅನುಭವ ಪಡೆಯಲು ಸಾಧ್ಯವಾಗುತ್ತಿದೆ. ಬದಲಾಗುತ್ತಿರುವ ಸಮಾಜಕ್ಕೆ ಅನುಗುಣವಾಗಿ ಕಾನೂನು ಶಿಕ್ಷಣದಲ್ಲೂ ಬದಲಾವಣೆಯಾಗಬೇಕು ಎಂದವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ ಜೋಶಿ ಅವರು ಮಾತನಾಡಿ ಕಾನೂನು ವೃತ್ತಿ ಎಂಬುದು ಶ್ರೇಷ್ಠ ವೃತ್ತಿಯಾಗಿದೆ. ಈ ವೃತ್ತಿಯಲ್ಲಿರುವವರು ಸಮಾಜದ ಹಾಗೂ ಸಮಾಜದಲ್ಲಿರುವ ಜನರ ನೋವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇಂದಿನ ವಕೀಲರಲ್ಲಿ ವೃತ್ತಿ ಕೌಶಲ್ಯದ ಕೊರತೆ ಇದೆ. ಅವರು ಪಾಟಿಸವಾಲಿನಲ್ಲಿ ಹೆಚ್ಚಿನ ನಿಪುಣತೆಯನ್ನು ಹೊಂದಬೇಕಾಗಿದೆ ಎಂದರು.
ದಿ.ಶಿವಾಜಿ ಶೆಟ್ಟಿ ಅವರ ಪತ್ನಿ ಜಯಂತಿ ಪಿ.ಶಿವಾಜಿ ಶೆಟ್ಟಿ, ಅಣಕ ನ್ಯಾಯಾಲಯ ಸ್ಪರ್ಧೆಯ ಸಂಯೋಜಕಿ ಡಾ. ನಿರ್ಮಲಾ ಕುಮಾರಿ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಕಣಿವೆ ಅತಿಥಿಗಳನ್ನು ಸ್ವಾಗತಿಸಿದರೆ, ಆರ್.ಕೆ.ವರ್ಷಾ ಹಾಗೂ ಡೆರಿಲ್ ಕ್ಲೆತ್ ಕ್ವಾಡ್ರಸ್ ಅತಿಥಿಗಳನ್ನು ಪರಿಚಯಿಸಿ ದರು. ಸ್ಮತಿ ಸುರೇಶ್ ವಂದಿಸಿದರು.