ಉಡುಪಿ ಜಿಲ್ಲಾ ಸಂಸ್ಥೆಗೆ ಕೆಎಸ್ಸಿಎ ಕ್ರಿಕೆಟ್ ಪ್ರಶಸ್ತಿ
ಮಂಗಳೂರು, ಎ.5: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಕೊಡಗು, ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಲಯದ ಎರಡನೆಯ ವಿಭಾಗದ ಲೀಗ್ ಮತ್ತು ನಾಕೌಟ್ ಕ್ರಿಕೆಟ್ ಪಂದ್ಯಾಟದ ಪ್ರಶಸ್ತಿಯನ್ನು ಉಡುಪಿ ಜಿಲ್ಲಾ ಕ್ರಿೆಟ್ ಸಂಸ್ಥೆ ತಂಡ ಗೆದ್ದುಕೊಂಡಿದೆ.
ಮಂಗಳೂರಿನ ಪಣಂಬೂರು ನವಮಂಗಳೂರು ಬಂದರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಉಡುಪಿ ತಂಡವು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ತಂಡವನ್ನು ಆರು ವಿಕೆಟ್ಗಳಿಂದ ಪರಾಭವಗೊಳಿಸಿತು.
ಉಡುಪಿ ತಂಡದ ರಾಮ್ ಭುಟಾನಿ ಅವರ ಅಜೇಯ 43 ರನ್ಗಳು ಹಾಗೂ ಯಶವಂತ ಅವರ ಅತ್ಯುತ್ತಮ ಬೌಲಿಂಗ್ (17ಕ್ಕೆ 5) ತಂಡದ ವಿಜಯದಲ್ಲಿ ಪ್ರಧಾನ ಪಾತ್ರ ವಹಿಸಿದವು. ರಾಮ್ ಭುಟಾನಿ ಅವರು ಪಂದ್ಯ ಕೂಟದಲ್ಲಿ ಮೂರು ಶತಕಗಳನ್ನೊಳಗೊಂಡ 455 ರನ್ಗಳನ್ನು ಗಳಿಸಿ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚಿದರು.
ಉಡುಪಿ ತಂಡ ಕಳೆದ ವರ್ಷದ ಮೂರನೇ ವಿಭಾಗದ ಪಂದ್ಯಾಟದಲ್ಲಿ ನಿರಂತರ 7 ವಿಜಯಗಳೊಂದಿಗೆ ಪ್ರಶಸ್ತಿಯನ್ನು ಪಡೆದು ಎರಡನೇ ವಿಭಾಗವನ್ನು ಪ್ರವೇಶಿಸಿತ್ತು. ಈ ಭಾರಿಯೂ ನಿರಂತರ 7 ವಿಜಯಗಳನ್ನು ದಾಖಲಿಸಿ ಅಪ್ರತಿಮ ಸಾಧನೆ ಮಾಡಿದೆ.