ರಾಜ್ಯದಲ್ಲಿ ಚುನಾವಣಾ ಕರ್ತವ್ಯಕ್ಕೆ 23 ಸಾವಿರ ಗೃಹರಕ್ಷಕರು: ಡಿಐಜಿಪಿ
ಮಂಗಳೂರು, ಎ.5: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದ್ದು, 23 ಸಾವಿರ ಗೃಹರಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಗೃಹರಕ್ಷಕ ದಳದ ಡಿಐಜಿಪಿ ರಾಜಪ್ಪ ತಿಳಿಸಿದರು.
ನಗರದ ಮೇರಿಹಿಲ್ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ, ಉಡುಪಿ, ಕಾರಾವಾರ ಚಿಕ್ಕಮಗಳೂರು ಸೇರಿದಂತೆ ಪಶ್ವಿಮ ವಲಯದಲ್ಲಿ 2,300 ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇದರಲ್ಲಿ ದಕ್ಷಿಣ ಕನ್ನಡದಿಂದ 850 ಮಂದಿ ಕರಾವಳಿ ಕಾವಲು ಪಡೆಯಿಂದ 362, ಕಾರವಾರದಿಂದ 660, ಚಿಕ್ಕಮಗಳೂರು 650 ಮಂದಿ ಸೇವೆ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಿಬ್ಬಂದಿಗೆ ವಾಹನ, ವಸತಿ ವ್ಯವಸ್ಥೆ ಸೇರಿದಂತೆ ವಿಶೇಷ ಭತ್ಯೆ ವ್ಯವಸ್ಥೆಗೆ ಸಂಬಂಧಿಸಿದಂತೆ ಈಗಾಗಲೇ ಮಾತುಕತೆ ನಡೆದಿದೆ. ಪೊಲೀಸರ ಜತೆಯೇ ಹೋಂಗಾರ್ಡ್ಗಳಿಗೂ ಸೌಲಭ್ಯ ನೀಡಲಾಗುವುದು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಗಳೂರು ಪೊಲೀಸ್ ಆಯುಕ್ತರ ಜತೆ ಮಾತುಕತೆ ನಡೆದಿದೆ ಎಂದರು.
ವೇತನ ಹೆಚ್ಚಳಕ್ಕೆ ಪ್ರಸ್ತಾವ: ಬೆಂಗಳೂರಿನಂತೆ ಮಂಗಳೂರಿನಲ್ಲೂ ಜೀವನ ನಿರ್ವಹಣೆ ದುಬಾರಿಯಾಗಿದೆ. ಈ ನಿಟ್ಟಿನಲ್ಲಿ ಸಮಾನ ಗೌರವಧನ ನೀಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭ ಗೃಹರಕ್ಷಕ ದಳದ ಉಡುಪಿ ಕಮಾಂಡೆಂಟ್ ಡಾ.ಪ್ರಶಾಂತ್ ಶೆಟ್ಟಿ, ಕಾರವಾರ ಕಮಾಂಡೆಂಟ್ ದೀಪಕ್, ದಕ್ಷಿಣ ಕನ್ನಡ ಕಮಾಂಡೆಂಟ್ ಡಾ.ಮುರಳಿ ಮೋಹನ್ ಚೂಂತಾರು, ಉಪಸಮಾದೇಷ್ಟ ರಮೇಶ್ ಉಪಸ್ಥಿತರಿದ್ದರು.