ಎಸೆಸೆಲ್ಸಿ ಮೌಲ್ಯಮಾಪನ; ನಿಷೇಧಾಜ್ಞೆ
ಉಡುಪಿ, ಎ.5: ಎಸೆಸೆಲ್ಸಿ ಪರೀಕ್ಷೆಯ ಮೌಲ್ಯಮಾಪನವು ಎ.10ರಿಂದ ಪ್ರಾರಂಭಗೊಂಡು ಸುಮಾರು 10 ದಿನಗಳವರೆಗೆ ಜಿಲ್ಲೆಯ ಆರು ಕೇಂದ್ರಗಳಲ್ಲಿ ನಡೆಯಲಿವೆ.
ಮೌಲ್ಯಮಾಪನ ಮುಗಿದು ಪ್ರಶ್ನೋತ್ತರ ಪತ್ರಿಕೆಗಳನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸಾಗಿಸುವ ವರೆಗೆ, ಜಿಲ್ಲೆಯ ಮೌಲ್ಯಮಾಪನ ಕೇಂದ್ರಗಳಾದ ಯು.ಕಮಲಾಬಾಯಿ ಪ್ರೌಢಶಾಲೆ ಕಡಿಯಾಳಿ, ಆದಿಉಡುಪಿ ಪ್ರೌಢಶಾಲೆ ಆದಿ ಉಡುಪಿ, ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂಜಿಬೆಟ್ಟು, ಸರ್ಕಾರಿ ಪ್ರೌಢಶಾಲೆ ವಳಕಾಡು, ಕ್ರಿಶ್ಚಿಯನ್ ಪ್ರೌಢಶಾಲೆ ಉಡುಪಿ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ- ಈ ಮೌಲ್ಯಮಾಪನ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಶಿಸ್ತು ಮತ್ತು ಶಾಂತಿಯನ್ನು ಕಾಪಾಡುವ ಸಲುವಾಗಿ, ನಿಗದಿಪಡಿಸಿದ ಎಲ್ಲಾ ಮೌಲ್ಯಮಾಪನ ಕೇಂದ್ರಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ 144(1)ರಂತೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.
ಈ ಆದೇಶದಂತೆ ನಿಷೇಧಿತ ಪ್ರದೇಶದ ಸುತ್ತಮುತ್ತ ಸಾರ್ವಜನಿಕರು 5 ಮಂದಿ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು/ ತಿರುಗುವುದು, ಅನುಮಾನಾಸ್ಪದ ವ್ಯಕ್ತಿಗಳು ಮೌಲ್ಯಮಾಪನ ಕೇಂದ್ರ ಪ್ರವೇಶಿಸುವುದು, ಮೌಲ್ಯಮಾಪನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೊರಗಿನ ವ್ಯಕ್ತಿಗಳು ಬೆದರಿಕೆ ಒಡ್ಡುವುದನ್ನು ನಿರ್ಬಂಧಿಸಲಾಗಿದೆ.
ಅಲ್ಲದೇ ನಿಷೇಧಿತ ಮೌಲ್ಯಮಾಪನ ಕೇಂದ್ರಗಳ ಸುತ್ತ ಮೊಬೈಲ್ ಬಳಕೆ ಹಾಗೂ ಮೌಲ್ಯಮಾಪನ ಸಾಮಾಗ್ರಿಗಳನ್ನು ಪರೀಕ್ಷಾ ಕೇಂದ್ರದಿಂದ ಹೊರಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.