ಉಡುಪಿ ತಾಲೂಕಿನ ಆರು ಕಡೆಗಳಲ್ಲಿ ಬೆಂಕಿ ಅಕಸ್ಮಿಕ
ಉಡುಪಿ, ಎ.5: ಉಡುಪಿ ತಾಲೂಕಿನಾದ್ಯಂತ ಇಂದು ಮಧ್ಯಾಹ್ನ ವೇಳೆ ಸುಡು ಬಿಸಿಲಿನ ಜೊತೆ ಬೀಸಿದ ಗಾಳಿಯ ಪರಿಣಾಮವಾಗಿ ಹಲವು ಗುಡ್ಡೆ ಹಾಗೂ ಗದ್ದೆಗಳಲ್ಲಿ ಬೆಂಕಿ ಅಕಸ್ಮಿಕ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದ ಬೀಡಿನಗುಡ್ಡೆಯ ಕಸದ ರಾಶಿ ಹಾಗೂ ಹುಲ್ಲು ಪ್ರದೇಶದಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಪರಿಸರವು ಹೊಗೆಯಿಂದ ಆವೃತ್ತಗೊಂಡಿತು. ಸ್ಥಳಕ್ಕೆ ದಾವಿಸಿದ ಉಡುಪಿ ಅಗ್ನಿ ಶಾಮಕದಳದ ಒಂದು ವಾಹನವು ಸುಮಾರು ಒಂದೂವರೆ ತಾಸುಗಳ ನಿರಂತರ ಶ್ರಮದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.
ಅದೇ ರೀತಿ ಮಧ್ಯಾಹ್ನ 2 ಗಂಟೆಗೆ ಪಡುಬಿದ್ರೆ ಸಮೀಪ ಗದ್ದೆಯಲ್ಲಿ ಬೆಂಕಿ ಅಕಸ್ಮಿಕ ಸಂಭವಿಸಿದ್ದು, ಉಡುಪಿಯ ಅಗ್ನಿಶಾಮಕದಳ ಸಿಬ್ಬಂದಿಗಳು ತೆರಳಿ 4:40ರ ಸುಮಾರಿಗೆ ಬೆಂಕಿಯನ್ನು ತಹಬಂದಿಗೆ ತಂದರು. ಅಲ್ಲದೆ ಕಡೆಕಾರು ಜಂಕ್ಷನ್ನಲ್ಲಿರುವ ಗದ್ದೆಯಲ್ಲಿ ಸಂಜೆ 4:45ರ ಸುಮಾರಿಗೆ ಬೆಂಕಿ ಕಾಣಿಸಿ ಕೊಂಡಿದ್ದು, ಒಂದು ವಾಹನದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಸುಮಾರು ಒಂದು ಗಂಟೆಗಳ ಶ್ರಮದಿಂದ ಬೆಂಕಿ ನಂದಿಸಿದರು.
ಸಂಜೆ 6:30ರ ಸುಮಾರಿಗೆ ಇಂದ್ರಾಳಿ ಸಮೀಪದ ಗುಡ್ಡೆಯಲ್ಲಿ, ನಗರದ ಕಲ್ಸಂಕ ಸಮೀಪದ ಗುಂಡಿಬೈಲು ಮತ್ತು ಪಡುಬಿದ್ರೆ ಸಮೀಪದ ಎರ್ಮಾಳ್ ಎಂಬಲ್ಲಿಯೂ ಬೆಂಕಿ ಅಕಸ್ಮಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
‘ಮಧ್ಯಾಹ್ನ ನಂತರ ತಾಲೂಕಿನ ಆರು ಕಡೆಗಳಲ್ಲಿ ಬೆಂಕಿ ಅಕಸ್ಮಿಕ ಸಂಭ ವಿಸಿದ್ದು, ಉಡುಪಿ ಅಗ್ನಿಶಾಮಕ ದಳದ ಎರಡು ವಾಹನ ಹಾಗೂ ಮಲ್ಪೆ ಒಂದು ವಾಹನ ಸತತವಾಗಿ ಬೆಂಕಿ ನಂದಿಸುವ ಕಾರ್ಯ ನಡೆಸಿವೆ. ಇದರಲ್ಲಿ ಉಡುಪಿ ಯ 25 ಹಾಗೂ ಮಲ್ಪೆ 10 ಮಂದಿ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ. ಎರ್ಮಾಳಿನಲ್ಲಿ ಗದ್ದೆ ಪೂರ್ತಿ ಬೆಂಕಿ ಹರಡಿದ್ದು ತಡರಾತ್ರಿವರೆಗೂ ಎರಡು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ ಎಂದು ಅಗ್ನಿಶಾಮಕದಳ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.