ಮೋದಿ ಸರಕಾರದಲ್ಲಿ ಅಲ್ಪಸಂಖ್ಯಾತರಿಗೆ ಭದ್ರತೆಯ ವಾತಾವರಣ ನಿರ್ಮಾಣ: ರಫೀಕ್ ದರ್ಬೆ
ಪುತ್ತೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲರನ್ನೂ ಸಮಾನವಾಗಿ ಕಂಡಿದ್ದು, ಅಲ್ಪಸಂಖ್ಯಾಕರ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಭದ್ರತೆಯ ವಾತಾವರಣ ನಿರ್ಮಾಣ ಮಾಡಿದ್ದಾರೆ. ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಪುತ್ತೂರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯ ರಫೀಕ್ ದರ್ಬೆ ತಿಳಿಸಿದರು.
ಅವರು ಪುತ್ತೂರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯಾವುದೇ ಯೋಜನೆಗಳನ್ನು ರೂಪಿಸುವಾಗ ಜಾತಿ, ಧರ್ಮವನ್ನು ಬದಿಗಿಟ್ಟು ಫಲಾನುಭವಿಯ ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡಿರುವುದು ಮೋದಿ ಸರಕಾರದ ಶ್ಲಾಘನೀಯ ಕೆಲಸವಾಗಿದೆ. ಮೋದಿ ಸರಕಾರದ ತ್ರಿವಳಿ ತಲಾಕ್ ನಿಷೇಧ ಕಾಯಿದೆಯು ಮುಸ್ಲಿಂ ಸಮುದಾಯದ ಮಹಿಳೆಯರ ಸಾಮಾಜಿಕ ಭದ್ರತೆಗೆ ಮುನ್ನಡಿಯಾಗಿದೆ. ಉಜ್ವಲ ಗ್ಯಾಸ್, ದೀನ್ ದಯಾಳ್ ವಿದ್ಯುದ್ದೀಕರಣ ಯೋಜನೆಯ ಫಲಾನುಭವಿಗಳಲ್ಲಿ ಹೆಚ್ಚಿನ ಜನರು ಅಲ್ಪಸಂಖ್ಯಾತರೇ ಆಗಿದ್ದಾರೆ. ಹಿಂದಿನ ಕೇಂದ್ರ ಸರ್ಕಾರಗಳು ಹಜ್ ಯಾತ್ರೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ಬದಲಾಯಿಸಿ ಅಲ್ಪಸಂಖ್ಯಾಕತರ ಶಿಕ್ಷಣಕ್ಕೆ ಬಳಸಿಕೊಳ್ಳುವ ನಿಲುವು ಪ್ರಧಾನಿ ಮೋದಿಯವರು ಅಲ್ಪ ಸಂಖ್ಯಾತರಿಗೆ ನೀಡಿರುವ ಪ್ರೋತ್ಸಾಹವಾಗಿದೆ ಎಂದರು.
ತಾಲೂಕು ಅಲ್ಪಸಂಖ್ಯಾತ ಮೋರ್ಚಾ ತಾಲೂಕು ಅಧ್ಯಕ್ಷ ಅಬ್ದುಲ್ ಕುಂಞಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯ 7 ಶಾಸಕರು ಆಯ್ಕೆಯಾದ ಬಳಿಕ ಒಂದು ವರ್ಷದಲ್ಲಿ ಯಾವುದೇ ಕೋಮು ಗಲಭೆಗಳು ನಡೆದಿಲ್ಲ. ಇದು ಕೋಮು ಗಲಭೆಗಳು ನಡೆಯುವುದು ಯಾರ ಅವಧಿಯಲ್ಲಿ ಎಂಬುದನ್ನು ಇದು ತಿಳಿಸುತ್ತದೆ. ದೇಶವನ್ನು ಪ್ರೀತಿಸುವವರನ್ನು ಬಿಜೆಪಿ ಮತ್ತು ಸಂಘ ಪರಿವಾರಗಳು ಎಂದಿಗೂ ದೂರ ಮಾಡಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ತಾಲೂಕು ಕಾರ್ಯದರ್ಶಿ ರಝಾಕ್, ಬಿಜೆಪಿ ಕಾರ್ಯಕರ್ತರಾದ ಸಂದೀಪ್ ಲೋಬೊ ಮತ್ತು ಉಸ್ಮಾನ್ ನೆಕ್ಕಿಲು ಉಪಸ್ಥಿತರಿದ್ದರು.