ಮಂಡ್ಯ: ಎ.12ಕ್ಕೆ ಸಿದ್ದರಾಮಯ್ಯ-ದೇವೇಗೌಡ ಜಂಟಿ ಪ್ರಚಾರ
ಬೆಂಗಳೂರು, ಎ.6: ಲೋಕಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದರಿಂದ ಜಂಟಿ ಪ್ರಚಾರ ನಡೆಸಲು ತೀರ್ಮಾನಿಸಲಾಗಿದ್ದು, ಎ.12ಕ್ಕೆ ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದೇನೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮೈಸೂರು ಜಿಲ್ಲೆ ಚಾಮರಾಜ ಕ್ಷೇತ್ರದ ಹರೀಶಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎಚ್.ಡಿ. ದೇವೇಗೌಡರೊಂದಿಗೆ ಎ.10ರಂದು ಮೈಸೂರು, ಎ.11 ರಂದು ತುಮಕೂರು, ಎ.12 ಮಂಡ್ಯದಲ್ಲಿ ಜಂಟಿ ಪ್ರಚಾರ ಮಾಡುತ್ತೇವೆ. ಬಳಿಕ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಮೈಸೂರು ಲೋಕಸಭಾ ಚುನಾವಣೆ ನಮ್ಮ ಪ್ರತಿಷ್ಠೆಯ ಚುನಾವಣೆ. ಜಿಲ್ಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರುವುದು ಸತ್ಯ. ಆದರೆ, ನಾವು ಜಂಟಿಯಾಗಿ ಪ್ರಚಾರ ಮಾಡುತ್ತೇವೆ. ಕೆಲ ಸಭೆಯಲ್ಲಿ ಯಾರೋ ಇಬ್ಬರು ಕಾಂಗ್ರೆಸ್ಗೆ ಮತ ಹಾಕಲ್ಲ ಅಂದರು. ಅದೇ ದೊಡ್ಡ ಸುದ್ದಿಯಾಗಿದೆ ಅಷ್ಟೇ. ಯಾರೋ ಒಬ್ಬರು- ಇಬ್ಬರು ಹೇಳಿದ ವ್ಯಕ್ತಿ ಅಭಿಪ್ರಾಯ ಮುಖ್ಯವಲ್ಲ. ಅಲ್ಲದೆ, ಶೇಕಡ 99 ರಷ್ಟು ನಾವು ಒಂದಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.