ಜಾತಿ ರಾಜಕಾರಣ ದೇಶಕ್ಕೆ ಮಾರಕ: ಎನ್.ಎ.ಹಾರಿಸ್
ಮಂಗಳೂರು, ಎ.6: ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಯಾವುದೇ ಸಾಧನೆ ಮಾಡಿಲ್ಲ. ನೋಟು ರದ್ದತಿ, ಜಿಎಸ್ಟಿ, ನಗರಗಳ ಹೆಸರನ್ನು ಬದಲಾವಣೆ ಮಾಡಿ ಜನರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಬಿಜೆಪಿಯ ಜಾತಿ ರಾಜಕಾರಣ ದೇಶಕ್ಕೆ ಮಾರಕವಾಗಿದೆ ಎಂದು ಬೆಂಗಳೂರಿನ ಶಾಸಕ ಎನ್.ಎ.ಹಾರಿಸ್ ತಿಳಿಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು ನರೇಂದ್ರ ಮೋದಿ ಜಪ ಮಾಡುತ್ತಿದ್ದಾರೆ. ಆದರೆ ಮೋದಿ ಸರಕಾರ ಯುವಕರಿಗೆ ಏನನ್ನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಸರಕಾರದ ರಫೇಲ್ ಹಗರಣದ ಬಗ್ಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು ‘ಚೌಕಿದಾರ್ ಚೋರ್ ಹೈ’ ಎಂದು ನೇರವಾಗಿ ಹೇಳಿದ್ದಾರೆ. ಪ್ರಧಾನಿ ಚೋರ್ ಅಲ್ಲದಿದ್ದರೆ ಸಿಬಿಐ ಅಧಿಕಾರಿಯನ್ನು ಯಾಕೆ ರಾತ್ರೋರಾತ್ರಿ ವರ್ಗಾವಣೆ ಮಾಡುತ್ತೀರಿ. ಕೋರ್ಟ್ ಅವರನ್ನು ಮತ್ತೇ ಅದೆ ಜಾಗಕ್ಕೆ ಕಳುಹಿಸಿದರೆ ಬಿಜೆಪಿ ಮತ್ತೆ ಬೇರೆ ಕಡೆಗೆ ವರ್ಗಾಯಿಸುತ್ತದೆ. ಫೈಲ್ ಕಳೆದು ಹೋಗಿದೆ ಎಂದು ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರ ಬಂದರೆ ಬೆಲೆ ಇಳಿಸುತ್ತೇವೆ ಎಂದಿದ್ದರು. ಆದರೆ ಈಗ ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಇದೆ. ಆದರೆ ಯಾವ ಪದಾರ್ಥಗಳ ಬೆಲೆ ಇಳಿಸಿದ್ದಾರೆ. ಮೊದಲು ಒಂದು ಡಾಲರ್ಗೆ 62 ರೂ. ಮೌಲ್ಯವಿತ್ತು. ಆದರೆ ಇಂದು 72 ರೂ.ಗೆ ಏರಿಕೆಯಾಗಿದೆ. ಅದಾನಿ ಆಸ್ತಿಗಳು ಮಾತ್ರ ಏರಿಕೆಯಾಗಿದೆ ಎಂದು ಕೇಂದ್ರದ ಆಡಳಿತ ವೈಖರಿಯನ್ನು ಟೀಕಿಸಿದರು.
ಕೇಂದ್ರದ ಬಿಜೆಪಿ ಸರಕಾರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ರೈತ ಕಷ್ಟವನ್ನು ತಾಳದೇ ರಾಜ್ಯ ಸರಕಾರ 75 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿತು. ಆದರೆ ಕೇಂದ್ರ ಸರಕಾರ ಯಾವ ರೈತನ ಸಾಲವನ್ನೂ ಮನ್ನಾ ಮಾಡಲಿಲ್ಲ. ಅಧಿಕಾರಕ್ಕಾಗಿ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಭರವಸೆಗಳು ಕೇವಲ ಭರವಸೆಯಾಗಿಯೇ ಉಳಿದಿವೆ ಎಂದು ದೂರಿದರು.