ದಕ್ಷಿಣ ಕನ್ನಡದಲ್ಲಿ ಮಿಥುನ್ ರೈ ಗೆಲುವು ತಿರುಕನ ಕನಸು : ಹರಿಕೃಷ್ಣ ಬಂಟ್ವಾಳ ಲೇವಡಿ
ಬಿಜೆಪಿಗೆ 2 ಲಕ್ಷ ಅಂತರದಲ್ಲಿ ಜಯದ ವಿಶ್ವಾಸ
ಬಂಟ್ವಾಳ, ಎ. 6: ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯಂತಹ ಶ್ರೇಷ್ಠ ರಾಜಕಾರಣಿಗೆ ದ.ಕ. ಜಿಲ್ಲೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ ಅಂದ ಮೇಲೂ ಯಾವುದೇ ಕೋನದಿಂದ ನೋಡಿದರೂ ಜನಾರ್ದನ ಪೂಜಾರಿಯವರ ಹತ್ತಿರ ಬರಲು ಸಾಧ್ಯವಾಗದ ಮಿಥುನ್ ರೈಗೆ ಗೆಲುವು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿಯ ಪೂರ್ವ ತಯಾರಿಯ ಬಗ್ಗೆ "ವಾರ್ತಾಭಾರತಿ" ಜೊತೆ ಅವರು ಮಾತನಾಡಿದರು.
ದ.ಕ.ಜಿಲ್ಲೆಯಲ್ಲಿ ಬಿಲ್ಲವ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರ. ವಿದ್ಯಾರ್ಹತೆ, ರಾಜಕೀಯ ಅನುಭವ, ಸಾಮಾಜಿಕ ಸೇವೆ ಸಲ್ಲಿಸಿರುವ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಿಲ್ಲ. ಈಗಿರುವಾಗ ಏನೂ ಅಲ್ಲದ ಮಿಥುನ್ ರೈಗೆ ಜನರು ಓಟ್ ಕೊಡ್ತಾರಾ ?. ಜಿಲ್ಲೆಯಲ್ಲಿ ಮಿಥುನ್ ರೈ ಗೆಲುವು ತಿರುಕನ ಕನಸು ಎಂದು ಲೇವಡಿ ಮಾಡಿದ ಅವರು, ಜನಾರ್ದನ ಪೂಜಾರಿಯವರ ಮುಂದೆ ಮಿಥುನ್ ರೈ ಎಂದಿಗೂ ಸಮಾನರಾಗುವುದಿಲ್ಲ. ಮಿಥುನ್ ರೈಗೆ ಜನರು ಮತ ಹಾಕುವುದಿಲ್ಲ ಎಂದು ಖಾರವಾಗಿ ನುಡಿದರು.
2 ಲಕ್ಷ ಅಂತರದಲ್ಲಿ ಗೆಲುವು
ಮೊದಲ ಸುತ್ತಿನ ಪ್ರಚಾರ ಮಗಿದಿದ್ದು, ನಾಳೆಯಿಂದ ಪ್ರತಿ ಮನೆ, ಮನೆಗೆ ತೆರಳಿ 2ನೆ ಸುತ್ತಿನ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದೇವೆ. ಬೂತ್ಗಳಿಗೆ ಓರ್ವ ಬೂತ್ ಪ್ರಮುಖರನ್ನು ನೇಮಕ ಮಾಡಿದ್ದೇವೆ. ತನಗೂ ರಾಯಿ ಗ್ರಾಮದ ಜವಾಬ್ದಾರಿ ಕೊಟ್ಟಿದ್ದಾರೆ. ಬೆಳಗ್ಗೆ 7ಗಂಟೆಯಿಂದ ಬೂತ್ನಲ್ಲಿ ಪ್ರಚಾರ ಕಾರ್ಯ ವನ್ನು ಕೈಗೊಳ್ಳುತ್ತಿದ್ದೇನೆ. ಕಳೆದ ಚುನಾವಣೆಗಿಂತ ಈ ಬಾರಿ 2 ಲಕ್ಷ ಅಂತರದಲ್ಲಿ ಜಯಗಳಿಸುವ ಗುರಿಯೊಂದಿಗೆ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ ಬಿಜೆಪಿಯ ಗೆಲುವಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲ. ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಪ್ರತಿಸ್ಪರ್ಧಿ ಆಗಿಯೇ ಇಲ್ಲ. ಇಲ್ಲಿ ಕಾಂಗ್ರೆಸ್ ಸ್ಥಾನ ನಗಣ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ನ ಒಳಜಗಳ ನಮಗೆ ಪ್ಲಸ್ ಪಾಯಿಂಟ್
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಡೆಸಿದ ಚುನಾವಣಾ ಪ್ರಚಾರಗಳು ಈ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಣಿಸುತ್ತಿಲ್ಲ. ಅದಲ್ಲದೆ, ಗುಂಪುಗಾರಿಕೆ, ಕಾಂಗ್ರೆಸ್ನಲ್ಲಿರುವ ಒಳ ಜಗಳವೇ ನಮಗೆ ಪ್ಲಸ್ ಪಾಯಿಂಟ್. ರಮಾನಾಥ ರೈ ಅವರು ಸ್ವತಃ ಮುತುವರ್ಜಿ ವಹಿಸಿದರೂ, ಅವರ ಪ್ರಚಾರವೂ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಎದುರಿಗೆ ಮಾತ್ರ ಕೆಲಸ ಮಾಡುವ ಹಾಗೆ ನಟಿಸುತ್ತಿದ್ದಾರೆ ಎಂದು ಹೇಳಿದರು.
ವಯಸ್ಸು ನೋಡಿ ಮತ ಹಾಕಲ್ಲ
ಕಳೆದ ಬಾರಿ ಕಾಂಗ್ರೆಸ್ನ 7 ಶಾಸಕರಿದ್ದ ಜಿಲ್ಲೆಯಲ್ಲಿ, ಕೇವಲ ಒಂದು ಶಾಸಕರಿದ್ದ ಬಿಜೆಪಿ ಗೆದ್ದಿದೆ. ಇದೀಗ ನೇರ ವಿರುದ್ಧವಾಗಿದೆ. ಬಿಜೆಪಿಯ 7 ಶಾಸಕರಿದ್ದು, ಕಾಂಗ್ರೆಸ್ನಲ್ಲಿ ಓರ್ವ ಶಾಸಕನಿರುವಾಗ ನಮ್ಮ ಗೆಲುವಿಗೆ ಯಾವುದೇ ಅಡ್ಡಿಯಾಗದು. ಬಹುದೊಡ್ಡ ಅಂತರದಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದ ಅವರು, ಜಿಲ್ಲೆಯ ಜನರು ವಯಸ್ಸು ನೋಡಿ ಮತ ಹಾಕುವುದಿಲ್ಲ. ನಳಿನ್ ಕುಮಾರ್ ಕಟೀಲು ಅವರಿಗೆ 50 ವರ್ಷ ಪ್ರಾಯ ಆಗಿದ್ದರೂ ಕೂಡಾ ಅದೊಂದು ಪ್ರಶ್ನೆಯೇ ಅಲ್ಲ. ಈ ಬಾರಿಯೂ ಕೂಡಾ ನರೇಂದ್ರ ಮೋದಿ ಅವರಿಗೆ ಮತ ಹಾಕಬೇಕೆನ್ನುವ ನಿರ್ಧಾರವನ್ನು ಜನರು ಕೈಗೊಂಡಿದ್ದಾರೆ. ಯುವಕ ಅಭ್ಯರ್ಥಿಯನ್ನು ನಿಲ್ಲಿಸಿದರೆ ಗೆಲುವು ಸಾಧಿಸಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ ಎಂದರು.
ಕೇಸರಿ ಶಾಲು ಕಂಡರೆ ಕಾಂಗ್ರೆಸ್ಗೆ ಅಲರ್ಜಿ
ಈ ಮೊದಲು ಕಾಂಗ್ರೆಸ್ಗೆ ಕೇಸರಿ ಕಂಡರೆ ಅಲರ್ಜಿ ಆಗುತ್ತಿತ್ತು. ಇದೀಗ ಹಿಂದುತ್ವದ ನಾಟಕಕೋಸ್ಕರ ಕೇಸರಿ ಶಾಲನ್ನು ಹಾಕುತ್ತಿದೆ. ಈ ಡ್ರಾಮಾ ಯಾಕೆ ಸ್ವಾಮಿ ?. ಪ್ರಚಾರದ ಸಮಯದಲ್ಲಿ ಕೇಸರಿ ಶಾಲು ಹಾಕಿ ಬಂದರೆ ಜನರು ಮತ ಕೊಡುವಷ್ಟು ಮೂರ್ಖರಲ್ಲ. ಮಿಥುನ್ ರೈ ಕಾಶ್ಮೀರ ಅಥವಾ ದಿಲ್ಲಿಯಿಂದ ಬಂದವನಲ್ಲ. ಅವನ ಬಗ್ಗೆ ಜನರಿಗೆ ಗೊತ್ತಿದೆ.
ಕಾಂಗ್ರೆಸ್ನದ್ದು ವಂಶ, ಜಾತಿ ರಾಜಕಾರಣ
ಕಾಂಗ್ರೆಸ್ ಜಾತ್ಯತೀತ ಸಿದ್ಧಾಂತ ಹೇಳಿಕೊಂಡು ಜಾತಿ ಹಾಗೂ ವಂಶ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್ ವಂಶ ರಾಜಕಾರಣದ ಪಕ್ಷ. ದೇಶದಲ್ಲಿ ರಾಷ್ಟ್ರೀಯ ಪಕ್ಷಗಳಿದ್ದರೆ ಅದು ಬಿಜೆಪಿ ಮತ್ತು ಕಮ್ಯೂನಿಸ್ಟ್ ಮಾತ್ರ. ಇದೀಗ ಜನರು ವಂಶ, ಜಾತಿ ರಾಜಕಾರಣವನ್ನು ತಿರಸ್ಕಾರ ಮಾಡುವ ಹಂತಕ್ಕೆ ಬಂದಿದ್ದಾರೆ. ವಂಶ ರಾಜಕಾರಣಕ್ಕೆ ಇನ್ನೂ ಭವಿಷ್ಯವಿಲ್ಲ. ಇದರಿಂದ ದೇಶ ಒಂದಾಗಿ ಉಳಿಯಲು ಸಾಧ್ಯವಿಲ್ಲ. ಈ ಬಾರಿ ಜನರು ವಂಶ ರಾಜಕಾರಣಕ್ಕೆ ಚುನಾವಣೆಯ ಮೂಲಕ ಬಹುದೊಡ್ಡ ಅಘಾತವನ್ನು ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಮುಸ್ಲಿಮರನ್ನು ಓಟಿನ ಸರಕಾಗಿ ಬಳಸಿಕೊಂಡಿದೆ
ಜಿಲ್ಲೆಯಲ್ಲಿ ಶೇ. 30 ರಷ್ಟು ಮುಸಲ್ಮಾನರು ಬಿಜೆಪಿ ಬೆಂಬಲಿಸಿದ್ದು, ಮತಹಾಕುವ ಭರವಸೆಯನ್ನೂ ನೀಡಿದ್ದಾರೆ. ಅದರಲ್ಲಿಯೂ ಮುಸ್ಲಿಂ ಸಮುದಾಯದ ಹೆಂಗಸರ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್ ಮುಸ್ಲಿಮರನ್ನು ಇಷ್ಟರತನಕ ಓಟಿನ ಸರಕಾಗಿ ಬಳಸಿಕೊಂಡಿದೆಯೇ ವಿನಃ ಎಲ್ಲಿಯೂ ರಾಜಕೀಯವಾಗಿ ಬೆಳೆಯಲು ಬಿಡುತ್ತಿಲ್ಲ. ಇದಕ್ಕೆ ಲೋಕಸಭಾ ಚುನಾಚವಣೆಯ ಟಿಕೆಟ್ ಹಂಚಿಕೆಯೇ ಸಾಕ್ಷಿ. ಇಲ್ಲಿ ಮುಸ್ಲಿಮರನ್ನು ಮತ ಹಾಕುವ ಯಂತ್ರವನ್ನಾಗಿ ಮಾತ್ರ ಕಾಂಗ್ರೆಸ್ ಬಳಸಿಕೊಂಡಿದೆ. ಕಾಂಗ್ರೆಸ್ನವರು ಹಿಂದು-ಮುಸ್ಲಿಮರನ್ನು ವಿಭಜನೆ ಮಾಡಿ ರಾಜಕೀಯ ಬೇಳೆ ಬೇಯಿಸುತ್ತಿದೆ. "ಎಜುಕೇಟೆಡ್ ಮುಸ್ಲಿಂ ಸಂಪೋರ್ಟ್ ಬಿಜೆಪಿ". ಬಿಜೆಪಿ ಎಂದಿಗೂ ಮುಸ್ಲಿಮರನ್ನು ಓಟಿನ ಸರಕಾಗಿ ಬಳಸಿಲ್ಲ. ನರೇಂದ್ರ ಮೋದಿ ಮುಸ್ಲಿಂ ವಿರೋಧಿ ಅಲ್ಲ ಎಂದ ಅವರು, ಈ ಹಿಂದೆ ಮಹಾತ್ಮ ಗಾಂಧಿಯಾದರೆ, ಇಂದು ಮೋದಿ. ಇಬ್ಬರೂ ಗುಜರಾತಿನವರೇ ಎಂದರು.
ನರೇಂದ್ರ ಮೋದಿ ಅವರು ಮುಸ್ಲಿಂ ವಿರೋಧಿಯಾಗಿ ಒಂದೇ ಒಂದು ಹೇಳಿಕೆ ನೀಡಿಲ್ಲ. ಮುಸ್ಲಿಮರ ಅಭ್ಯುದಯಕ್ಕೆ ಬಹಳಷ್ಟು ಶ್ರಮಿಸಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ಭಾರತೀಯತೆ ಬೇಕೆನ್ನುವುದೇ ಮೋದಿ ಅವರ ಸಂಕಲ್ಪ. ಈ ಸಲ ಕಾಂಗ್ರೆಸ್ನ ಮತ ಬಿಜೆಪಿ ಬರುತ್ತದೆಯೇ ಹೊರತು ಬಿಜೆಪಿಯ ಒಂದೇ ಒಂದು ಮತ ಕಾಂಗ್ರೆಸ್ಗೆ ಬೀಳುವುದಿಲ್ಲ. ಇದು ನೂರಕ್ಕೆ ನೂರು ಸತ್ಯ. ಚುನಾವಣೆ ಫಲಿತಾಂಶವೇ ಕಾದು ನೋಡಿ ಎಂದರು.
2020ರಲ್ಲಿ ಭಾರತ ವಿಶ್ವ ಗುರುವಾಗಿ ಎದ್ದು ನಿಲ್ಲುತ್ತದೆ ಎಂಬ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಭವಿಷ್ಯವನ್ನು 2019ರಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವ ಮೂಲಕ ನೂರುಕ್ಕೆ ನೂರು ಸಕಾರಗೊಳಿಸುತ್ತಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.