ಬಿಲ್ಲವರನ್ನು ಕೋಮುಗಲಭೆಗೆ ಬಳಸಿದ ಬಿಜೆಪಿ: ಮಧು ಬಂಗಾರಪ್ಪ ಆರೋಪ
ಮಂಗಳೂರು, ಎ.6: ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವರನ್ನು ಕೇವಲ ಕೋಮುಗಲಭೆಗೆ ಮಾತ್ರ ಬಿಜೆಪಿಯವರು ಬಳಸಿಕೊಳ್ಳುತ್ತಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಕಚೇರಿಯಲ್ಲಿ ಶನಿವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಣತಿಯಂತೆ ಕೆಲಸ ಮಾಡಿ ಬಿಲ್ಲವರು ಜೈಲು ಸೇರಿದ್ದಾರೆ. ಅವರನ್ನು ಜೈಲಿನಿಂದ ಬಿಡಿಸಿಕೊಳ್ಳುವ ಹಾಗೂ ಅವರಿಗೆ ವಕಾಲತ್ತು ವಹಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಕೇವಲ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ತೀಕ್ಷ್ಣವಾಗಿ ಟೀಕಿಸಿದರು.
ರಾಮನನ್ನು ಕೈಬಿಟ್ಟ ಬಿಜೆಪಿ
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಮನನ್ನು ಬಳಸಿಕೊಂಡ ಬಿಜೆಪಿ ಈ ಬಾರಿ ಸಂಪೂರ್ಣವಾಗಿ ಕೈಬಿಟ್ಟಿದೆ. ಹಿಂದೂ ಹಿಂದೂ ಎಂದು ಹೇಳಿಕೊಂಡು ಹಿಂದೂಗಳಲ್ಲೇ ತಾರತಮ್ಯ ಉಂಟುಮಾಡಲು ಹೊರಟಿದ್ದಾರೆ ಎಂದು ಹೇಳಿದರು.
ಆರ್. ಅಶೋಕ್ಗೆ ತಿರುಗೇಟು ನೀಡಿದ ಮಧು
ದ.ಕ. ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಅವರನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಗೂಂಡಾ ಎಂದು ಲೇವಡಿ ಮಾಡಿದ್ದಾರೆ. ಆದರೆ, ಈ ಮೊದಲು ಅಧಿಕಾರದಲ್ಲಿ ಇದೇ ಅಶೋಕ್ ಅವರು ಆರೆಸ್ಸೆಸ್, ಬಜರಂಗದಳ ಕಾರ್ಯಕರ್ತರಿಗೆ ಗೂಂಡಾಗಳೆಂದು ಪಟ್ಟಿ ಕಟ್ಟಿದ್ದರು. ಇಲ್ಲಿಯವರೆಗೆ ಆರೆಸ್ಸೆಸ್ನ ಗೂಂಡಾಗಳು ಕಾಣಿಸಲಿಲ್ಲವೇ ಎಂದು ಆರ್.ಅಶೋಕ್ ಅವರಿಗೆ ತಿರುಗೇಟು ನೀಡಿದರು.
ಬದಲಾವಣೆಗೆ ಹಾತೊರೆಯುತಿರುವ ಕರಾವಳಿ
ಕರಾವಳಿಯಲ್ಲಿ ಈ ಮೊದಲು ಬೆಂಕಿ ಹಚ್ಚುವ ಮಾತುಗಳೇ ಕೇಳಿ ಬರುತ್ತಿದ್ದವು. ಆದರೆ, ಮೈತ್ರಿ ಸರಕಾರ ಬಂದಾಗಿನಿಂದ ಕರಾವಳಿ ಭಾಗ ಶಾಂತಿಯುತ ವಾಗಿ, ಸೌಹಾರ್ದದಿಂದ ಕೂಡಿದೆ. ಅಧಿಕಾರಿಗಳ ಮೂಲಕ ಸರಕಾರವು ಸೌಹಾರ್ದವನ್ನು ಮೆರೆಯುವಲ್ಲಿ ಯಶಸ್ಸನ್ನು ಕಂಡಿದೆ. ಅದೇ ರೀತಿ ಲೋಕಸಭೆ ಯಲ್ಲೂ ಕಾಂಗ್ರೆಸ್ನ್ನು ಬೆಂಬಲಿಸಬೇಕಿದೆ. ಕರಾವಳಿ ಪ್ರದೇಶದಲ್ಲಿ ಬದಲಾವಣೆಗಾಗಿ ಇಲ್ಲಿನ ಜನರು ಹಾತೊರೆಯುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರದ ಮೋದಿ ಸರಕಾರವು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ನ್ನು ಹಾಕುವುದಾಗಿ ವಾಗ್ದಾನ ನೀಡಿತ್ತು. ಆದರೆ ಇಲ್ಲಿಯವರೆಗೆ ಒಂದು ಪೈಸೆಯನ್ನು ಖಾತೆಗೆ ಜಮೆ ಮಾಡಿಲ್ಲ. ರೈತರ ಸಾಲಮನ್ನಾ ಬಗ್ಗೆ ರಾಜ್ಯದ ಬಿಜೆಪಿ ಸಂಸದರಲ್ಲಿ ಒಬ್ಬರಾದರೂ ಮೋದಿಯನ್ನು ಕೇಳಿದರೇ ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ, ಮೋದಿ ಕೇವಲ ಅದಾನಿಗಳಂತಹ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬಿಜೆಪಿ ಎಂದರೆ ‘ಬಿಸಿನೆಸ್ ಜನತಾ ಪಾರ್ಟಿ’ ಎಂದು ಲೇವಡಿ ಮಾಡಿದರು.
ಶಾಸಕ ಎನ್.ಎ.ಹಾರಿಸ್ ಮಾತನಾಡಿ, ಮಿಲಿಟರಿಯನ್ನು ರಾಜಕೀಯಕ್ಕೆ ಬಳಸುವ ಮೂಲಕ ನರೇಂದ್ರ ಮೋದಿ ಕೀಳುಮಟ್ಟದ ರಾಜಕಾರಣ ಮಾಡುತ್ತಿ ದ್ದಾರೆ. ಇಂದಿರಾ ಗಾಂಧಿ ಅವಧಿಯಲ್ಲಿ ಹಲವು ಮಿಲಿಟರಿ ಸಾಧನೆಗಳನ್ನು ಮಾಡಿದ್ದರೂ ಇಂದಿರಾ ಅವರು ಅದನ್ನು ರಾಜಕೀಯಕ್ಕೆ ಬಳಸಿರಲಿಲ್ಲ. ಯಾವುದೇ ಅನುಭವವಿಲ್ಲದ ಅಂಬಾನಿ ಕಂಪೆನಿಗೆ ರಫೇಲ್ ಯುದ್ಧ ವಿಮಾನ ತಯಾರಿಸಲು ಅನುಮತಿ ನೀಡಿದ್ದಾರೆ. ಇತಿಹಾಸವುಳ್ಳ ‘ಎಚ್ಎಎಲ್’ನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಸುರೇಶ್ ಬಳ್ಳಾಲ್, ಅಕ್ಷಿತ್ ಸುವರ್ಣ ಹಾಗೂ ಜೆಡಿಎಸ್ನ ಮುಹಮ್ಮದ್ ಕುಂಞಿ ಉಪಸ್ಥಿತರಿದ್ದರು.