ಕ್ರಿಕೆಟ್ ಬೆಟ್ಟಿಂಗ್: ಮೂವರು ಆರೋಪಿಗಳ ಸೆರೆ
ಮಂಗಳೂರು, ಎ.6: ಮೊಬೈಲ್ನಲ್ಲಿ ‘ಕ್ರಿಕೆಟ್ ಲೈವ್ ಬಝ್’ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮೂವರು ಆರೋಪಿಗಳನ್ನು ಬಿಜೈನ ಲಾಡ್ಜ್ವೊಂದರಲ್ಲಿ ಉರ್ವ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದ ತಾಳಿಕೋಟೆ ನಿವಾಸಿ ಇಸ್ಮಾಯೀಲ್ (26), ಬೆಳ್ತಂಗಡಿಯ ಕಳಂಜೆ ನಿವಾಸಿ ಜೋಸೆಫ್ ಥೋಮಸ್ (27), ಅಡ್ಯಾರ್ ಒಳಚಿಲ್ ನಿವಾಸಿ ಇಸ್ಮಾಯೀಲ್ (65) ಬಂಧಿತ ಆರೋಪಿಗಳು.
ಎ.5ರಂದು ಉರ್ವ ಠಾಣಾ ಸರಹದ್ದಿನ ಬಿಜೈ ಲಾಡ್ಜ್ನ ರೂಂ ಒಂದರಲ್ಲಿ ಮೊಬೈಲ್ ಮೂಲಕ ಮೂವರು ಆರೋಪಿಗಳು ‘ಕೋಲ್ಕತ್ತ ನೈಟ್ ರೈಡರ್ಸ್’ ಮತ್ತು ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಮಧ್ಯೆ ನಡೆಯುತ್ತಿದ್ದ ಐಪಿಎಲ್ ಟಿ-20 ಪಂದ್ಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು.
ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ದೊರೆತ ಖಚಿತ ವರ್ತಮಾನದಂತೆ ಉರ್ವ ಠಾಣಾ ಪೊಲೀಸ್ ನಿರೀಕ್ಷಕರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದರು.
ಆರೋಪಿಗಳಿಂದ ಮೂರು ಮೊಬೈಲ್, 1,320 ರೂ. ನಗದು ಸೇರಿದಂತೆ 11,620 ರೂ. ವೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗದರ್ಶನ ದಂತೆ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉರ್ವ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಗುರುಪ್ರಸಾದ್ ಎ., ಪೊಲೀಸ್ ಉಪನಿರೀಕ್ಷಕಿ ವನಜಾಕ್ಷಿ ಕೆ., ಪ್ರೊಬೇಷನರಿ ಪಿಎಸ್ಸೈ ಹರೋನ್ ಅಖ್ತರ್ ಹಾಗೂ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.