ಸಿಬ್ಬಂದಿ ಮಧ್ಯೆ ಕುಳಿತು ಚುನಾವಣಾ ತರಬೇತಿ ಪಡೆದ ಉಡುಪಿ ಜಿಲ್ಲಾಧಿಕಾರಿ !
ಉಡುಪಿ, ಎ. 7: ಉಡುಪಿಯ ಸೈಂಟ್ ಸಿಸಿಲಿ ಶಾಲೆಯಲ್ಲಿ ರವಿವಾರ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳಿಗೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮಕ್ಕೆ ಅನೀರಿಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸಿಬ್ಬಂದಿಗಳ ಮಧ್ಯೆ ಕುಳಿತು ತರಬೇತಿ ಪಡೆದುಕೊಂಡದ್ದು ವಿಶೇಷವಾಗಿತ್ತು.
ತರಬೇತಿ ನಡೆಯುತ್ತಿದ್ದ ಶಾಲಾ ಕೊಠಡಿಗೆ ಅನಿರೀಕ್ಷಿತವಾಗಿ ಆಗಮಿಸಿದ ಜಿಲ್ಲಾಧಿಕಾರಿ ನೇರವಾಗಿ ಸಿಬ್ಬಂದಿ ಮಧ್ಯೆ ತೆರಳಿ ಕುಳಿತುಕೊಂಡರು. ಇದರಿಂದ ತರಬೇತುದಾರರು ಮತ್ತು ಸಿಬ್ಬಂದಿ ಕೆಲಕಾಲ ಗಲಿಬಿಲಿಗೊಂಡರಲ್ಲದೆ ಆಶ್ಚರ್ಯಪಟ್ಟರು. ಬಳಿಕ ಜಿಲ್ಲಾಧಿಕಾರಿ ತರಬೇತುದಾರರಿಗೆ ತರಬೇತಿ ಮುಂದುವರಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಕೊಠಡಿಗೆ ಆಗಮಿಸಿದಾಗ ಮತಗಟ್ಟೆಗೆ ಮತದಾರರಲ್ಲದೆ ಯಾರಿಗೆ ಪ್ರವೇಶ ನೀಡಬಹುದು ಎಂಬ ವಿಷಯದ ಕುರಿತು ತರಬೇತಿ ನೀಡಲಾಗುತ್ತಿತ್ತು. ಮಾತು ಮುಂದುವರೆಸಿದ ತರಬೇತುದಾರರು, ಚುನಾವಣಾ ಆಯೋಗದಿಂದ ಅಧಿಕೃತ ಗುರುತಿನ ಚೀಟಿ ಪಡೆದ ಪತ್ರಕರ್ತ ರಿಗೆ ಮಾತ್ರ ಪ್ರವೇಶ ನೀಡಬಹುದಾಗಿದ್ದು, ಮತದಾರರನ್ನು ಹೊರತುಪಡಿಸಿ ಇತರೆ ಯಾರಿಗೂ ಪ್ರವೇಶ ಇಲ್ಲ. ಗುರುತು ಚೀಟಿ ಇಲ್ಲದೆ, ತಮ್ಮ ಸಂಸ್ಥೆಯ ಗುರುತು ಚೀಟಿ ನೀಡಿದರೂ ಪ್ರವೇಶ ನೀಡಬಾರದು ಎಂದು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ, ತರಬೇತಿಯ ಸಮಯದಲ್ಲಿ ಯಾವುದೇ ಸಂಶಯಗಳಿದ್ದರೂ ಪರಿಹರಿಸಿಕೊಳ್ಳಬೇಕು. ಮತ ಕೇಂದ್ರದಲ್ಲಿ ಸಿಬ್ಬಂದಿ ಅನಾವಶ್ಯಕವಾಗಿ ಚರ್ಚೆ ಮಾಡಬಾರದು. ಸಮಸ್ಯೆಗಳಿದ್ದಲ್ಲಿ ನೇರವಾಗಿ ತಿಳಿಸಬೇಕು. ಉಡುಪಿ ಜಿಲ್ಲೆ ಇಡೀ ರಾಜ್ಯಕ್ಕೆ ಎಲ್ಲಾ ವಿಧದಲ್ಲಿಯೂ ಮಾದರಿ ಯಾಗಿದ್ದು, ಚುನಾವಣಾ ಕಾರ್ಯದಲ್ಲೂ ಸಹ ಮಾದರಿಯಾಗಬೇಕಾಗಿದೆ ಎಂದರು.
ಸುಗಮ ಚುನಾವಣೆಗಾಗಿ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು. ಚುನಾವಣೆಯ ಕರ್ತವ್ಯ ಕಷ್ಟ ಎಂದು ಕೊಳ್ಳಬಾರದು. ಪ್ರತಿಯೊಬ್ಬರಿಗೂ ಚುನಾ ವಣಾ ಕರ್ತವ್ಯ ಸಿಗುವುದಿಲ್ಲ, ನೀವು ಅರ್ಹರಿದ್ದಿರೀ ಎಂದು ನಿಮ್ಮನ್ನು ಕರ್ತವ್ಯಕ್ಕೆ ಆಯ್ಕೆ ಮಾಡಲಾಗಿದೆ ಎಂದ ಜಿಲ್ಲಾಧಿಕಾರಿ, ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.