ಯುಗಾದಿ ಹೊಸ ಬದುಕಿಗೆ ಚೈತನ್ಯ ತುಂಬುವ ಹಬ್ಬ: ರಮೇಶ ಶಾಸ್ತ್ರಿ
ಶಿರ್ವ, ಎ.7: ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷತೆ ಇದೆ. ಪ್ರತಿಯೊಂದು ಹಬ್ಬದ ಆಚರಣೆಯಲ್ಲೂ ಉದಾತ್ತ ವೌಲ್ಯಗಳಿವೆ. ಯುಗಾದಿ ಹೊಸ ಬದುಕಿಗೆ ಚೈತನ್ಯವನ್ನು ತುಂಬುವ ಹಬ್ಬ ಎಂದು ಸೂಡ ಸರಕಾರಿ ಪ್ರೌಢ ಶಾಲಾ ಶಿಕ್ಷಕ ರಮೇಶ ಶಾಸ್ತ್ರಿ ಹೇಳಿದ್ದಾರೆ.
ಶಿರ್ವ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಶಿರ್ವ ಮಹಿಳಾ ಮಂಡಲದ ವತಿಯಿಂದ ಶಿರ್ವ ಮಹಿಳಾ ಮಂಡಲದ ಕುತ್ಯಾರು ಕನ್ಯಾನ ಪ್ರೇಮಾ ಆರ್.ಶೆಟ್ಟಿ ವೇದಿಕೆಯಲ್ಲಿ ಶನಿವಾರ ಆಯೋಜಿಸಲಾದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಶಿರ್ವದ ಪ್ರಗತಿಪರ ಕೃಷಿಕ ಎಸ್.ಶಂಭು ಶೆಟ್ಟಿ ಮತ್ತು ಹೇಮಲತಾ ಶೆಟ್ಟಿ ಹಾಗೂ ಭಜನಾ ತರಬೇತುದಾರ ರಮೇಶ ಶಾಸ್ತ್ರಿ ಮತ್ತು ರೇಣುಕಾ ದಂಪತಿಯನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀಪತಿ ಕಾಮತ್ ವಹಿಸಿದ್ದರು.
ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಜಗದೀಶ್ ಅರಸ್, ಉಪಾಧ್ಯಕ್ಷೆ ಸುನೀತಾ ಸದಾನಂದ್, ಸಮಾಜಸೇವಕ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಹಿರಿಯರಾದ ವಸಂತ ಶೆಣೈ, ಕೆ.ಸುಂದರ ಪ್ರಭು, ತಮ್ಮಣ್ಣ ಪೂಜಾರಿ ಉಪಸ್ಥಿತರಿದ್ದರು.
ಸರ್ವರಿಗೂ ಮಹಿಳಾ ಮಂಡಲದ ಸದಸ್ಯೆಯರಿಂದ ಬೇವುಬೆಲ್ಲದ ಸ್ವಾಗತ ನೀಡಲಾಯಿತು. ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ನಿವೃತ್ತ ಶಿಕ್ಷಕ ಎಚ್.ಎಸ್.ಗೋಪಾಲ್ ವಂದಿಸಿದರು. ಸುಮತಿ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಿರ್ವ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಗಳು ಜರುಗಿದವು.