ಕಾಂಗ್ರೆಸ್ ಪ್ರಣಾಳಿಕೆ ದೇಶಕ್ಕೆ ಅಪಾಯಕಾರಿ: ಶೋಭಾ ಕರಂದ್ಲಾಜೆ
ಕಾಪು, ಎ.7: ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಪ್ರಣಾಳಿಕೆ ದೇಶದ ಸಮಗ್ರತೆ ಮತ್ತು ಭದ್ರತೆಯ ದೃಷ್ಠಿಯಿಂದ ಅತ್ಯಂತ ಅಪಾಯಕಾರಿಯಾಗಿದ್ದು, ದೇಶದ ಹಿತಕ್ಕೆ ಗಂಡಾಂತರಕಾರಿಯಾಗಿದೆ ಎಂದು ಸಂಸದೆ ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಾಪು ಕ್ಷೇತ್ರದ ಕೆಮ್ತೂರಿನಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಭೆಯ ನ್ನುದ್ದೇಶಿಸಿ ಮಾತನಾಡಿದ ಶೋಭಾ, ಕಾಶ್ಮೀರದಲ್ಲಿನ ಸೇನೆಯ ಹಿಂತೆಗೆತ, ದೇಶ ದ್ರೋಹದ ಕಾನೂನು ರದ್ದು, ಸಶಸ್ತ್ರ ಪಡೆಗಳಿಗೆ ನೀಡಲಾಗಿದ್ದ ಅಧಿಕಾರದ ಕಡಿತವೇ ಮೊದಲಾದ ಅಂಶಗಳಿರುವ ಕಾಂಗ್ರೆಸ್ ಪ್ರಣಾಳಿಕೆ ದೇಶದ ಸಮಗ್ರತೆಗೆ ನೀಡಿದ ಸವಾಲಾಗಿದೆ ಎಂದವರು ಅಭಿಪ್ರಾಯ ಪಟ್ಟರು.
ಕಾಪು ಶಾಸಕ ಲಾಲಾಜಿ. ಆರ್ ಮೆಂಡನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಪಾದೆಬೆಟ್ಟು ಪ್ರಕಾಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ್ ಬಾಬು, ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಗಣೇಶ್, ಜಿಪಂ ಸದಸ್ಯೆ ಗಿತಾಂಜಲಿ ಎಂ. ಸುವರ್ಣ ಮುಂತಾದವರು ಉಪಸ್ಥಿತರಿದ್ದರು.