ರಾಮಕೃಷ್ಣ ಟೆನ್ನಿಸ್ ಕ್ಲಬ್ ನಲ್ಲಿ ಟೆನ್ನಿಸ್ ತರಬೇತಿ ಶಿಬಿರಕ್ಕೆ ಚಾಲನೆ
ಮಂಗಳೂರು, ಎ. 7: ನಗರದ ಶಿವಭಾಗ್ನಲ್ಲಿರುವ ರಾಮಕೃಷ್ಣ ಟೆನ್ನಿಸ್ ಕ್ಲಬ್ನಲ್ಲಿ ರವಿವಾರ ಆಯೋಜಿಸಿದ್ದ ಟೆನ್ನಿಸ್ ತರಬೇತಿ ಶಿಬಿರಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಚಾಲನೆ ನೀಡಿದರು.
ಟೆನ್ನಿಸ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಪೊಲೀಸ್ ಆಯುಕ್ತ, ರಾಮಕೃಷ್ಣ ಟೆನ್ನಿಸ್ ಕ್ಲಬ್ ಆರಂಭಿಸಿರುವ ತರಬೇತಿ ಕಾರ್ಯಕ್ರಮವು ಮಾದರಿ ಯಾಗಿದೆ. ತಾನು ಒಬ್ಬ ಟೆನ್ನಿಸ್ ಕ್ರೀಡಾಪಟುವಾಗಿದ್ದು, ರಾಜ್ಯದ ಹಲವು ಜಿಲ್ಲೆಗಳ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೂ ಟೆನ್ನಿಸ್ ಆಡುತ್ತಿದೆ. ಮಕ್ಕಳು ಟೆನ್ನಿಸ್ ಆಡುವುದು ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು. ರಾಮಕೃಷ್ಣ ಟೆನ್ನಿಸ್ ಕ್ಲಬ್ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಟೆನ್ನಿಸ್ ತರಬೇತಿ ನೀಡುವ ಮೂಲಕ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿರುವುದು ಸ್ವಾಗತಾರ್ಹ ಎಂದರು.
ರಾಮಕೃಷ್ಣ ಟೆನ್ನಿಸ್ ಕ್ಲಬ್ನ ಅಧ್ಯಕ್ಷ, ಯೆನೆಪೊಯ ವಿವಿ ಉಪಕುಲಪತಿ ಫರ್ಹಾದ್ ಮಾತನಾಡಿ, ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಂಗಳೂರಿ ನವರು ಟೆನ್ನಿಸ್ ಕ್ರೀಡೆಯಲ್ಲಿ ತುಂಬಾ ಹಿಂದುಳಿದಿದ್ದಾರೆ. ಟೆನ್ನಿಸ್ ಕ್ರೀಡೆಗೆ ಮಂಗಳೂರಿನಲ್ಲಿ ಬೇಡಿಕೆ ಕಡಿಮೆ ಇದೆ. ಜಿಲ್ಲೆಯ ಪ್ರತಿಭೆಗಳಿಗೆ ತರಬೇತುದಾರರು ಹಾಗೂ ಟೆನ್ನಿಸ್ ಅಂಗಣಗಳ ಕೊರತೆಯಿದೆ. ಇದನ್ನು ಮನಗಂಡು ರಾಜ್ಯದ ವಿವಿಧೆಡೆಯಿಂದ ಟೆನ್ನಿಸ್ ತರಬೇತುದಾರರನ್ನು ಕರೆಸಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಂಗಳೂರು ಟೆನ್ನಿಸ್ ಆಟಗಾರರಿಗೆ ಲಭ್ಯವಿರುವ ವಿಶಿಷ್ಟ ಆಯ್ಕೆಯಾಗಿದೆ. ಕೆನರಾ ಟೆನ್ನಿಸ್ ಅಕಾಡಮಿ, ಇಡನ್ ಕ್ಲಬ್ ಹಾಗೂ ರಾಮಕೃಷ್ಣ ಟೆನ್ನಿಸ್ ಕ್ಲಬ್ನಲ್ಲೂ ಟೆನ್ನಿಸ್ ಕ್ರೀಡೆಗೆ ವಿಶೇಷ ಆದ್ಯತೆ ಇದೆ ಎಂದು ಮಾಹಿತಿ ನೀಡಿದರು.
ಮೂರು ವರ್ಷ ಮೇಲ್ಪಟ್ಟ ಮಕ್ಕಳು ಹಾಗೂ ಯುವಕರಿಗೆ ತರಬೇತಿ ಶಿಬಿರದಲ್ಲಿ ಮುಕ್ತ ಆಹ್ವಾನವಿದೆ. ಅನುಭವಿ ತರಬೇತುದಾರ ಮಾನ್ಸಿಂಗ್ ತಪ್ಪಾ ಹಾಗೂ ‘ಐಟಿಎಫ್ ಲೆವೆಲ್ 1 ಎಐಟಿಎ-3’ನಿಂದ ಪ್ರಮಾಣಪತ್ರ ಪಡೆದ ಅನುಭವಿಗಳು ತರಬೇತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ರಾಮಕೃಷ್ಣ ಟೆನ್ನಿಸ್ ಕ್ಲಬ್ ಉಪಾಧ್ಯಕ್ಷ ವಿ. ಅರ್ಷದ್ ಹುಸೈನ್ ಉಪಸ್ಥಿತರಿದ್ದರು. ತುಂಬೆ ಗ್ರೂಪ್ನ ಎಂಡಿ ಅಬ್ದುಲ್ ಸಲಾಮ್ ಸ್ವಾಗತಿಸಿದರು. ಟೆನ್ನಿಸ್ ತರಬೇತಿ ಶಿಬಿರದ ಸಂಯೋಜಕಿ ಅಂಜನಾ ಕಾಮತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.