ನಳಿನ್ ಆಡಳಿತ ವೈಫಲ್ಯವೇ ಬಿಜೆಪಿಗೆ ಸೋಲು: ಅಶ್ವನಿ ಕುಮಾರ್ ರೈ
ಬಂಟ್ವಾಳ, ಎ. 7: ಸಂಸದ ನಳಿನ್ ಕುಮಾರ್ ಅವರ ಆಡಳಿತ ವೈಫಲ್ಯವೇ ಈ ಬಾರಿ ಬಿಜೆಪಿಗೆ ಸೋಲಿನ ಆಘಾತವನ್ನು ಕೊಡಲಿದೆ ಎಂದು ಹಿರಿಯ ನ್ಯಾಯವಾದಿ, ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಹೇಳಿದ್ದಾರೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಶಾಂತಿಯಂಗಡಿ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಮತಯಾಚನೆ, ಪಾದಾಯಾತ್ರೆ ಕೈಗೊಂಡು ಮಾತನಾಡಿದ ಅವರು, ನಳಿನ್ ಎರಡು ಅವಧಿ ಸಂಸದನಾದರೂ, ಮಂಗಳೂರು ನಗರವನ್ನು ಅಭಿವೃದ್ಧಿ ಮಾಡಿಸುವಲ್ಲಿ ಸಂಪೂರ್ಣ ಸೋಲು ಕಂಡಿದ್ದಾರೆ ಎಂದು ಟೀಕಿಸಿದರು.
ಶಾಂತಿಯಂಗಡಿ, ಪರ್ಲಿಯಾ, ಮಧ್ವ, ತಾಳಿಪಡ್ಪು, ಕೊಡಂಗೆ, ಕೈಕಂಬ ಪರಿಸರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ಅಶ್ವನಿ ಕುಮಾರ್ ರೈ, ಮಿಥುನ್ ರೈ ಪರ ಮತಯಾಚನೆ ನಡೆಸಿದರು.
ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ, ಮಾಜಿ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಶರೀಫ್ ಶಾಂತಿಯಂಗಡಿ, ಲುಕ್ಮಾನ್ ಕೈಕಂಬ, ಇರಾ ಗ್ರಾಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ, ಪ್ರಮುಖರಾದ ಅಮೀರ್ ತುಂಬೆ, ಸ್ಟೀವನ್ ಡಿಸೋಜ, ಗೋಪಾಲಕೃಷ್ಣ ತುಂಬೆ, ಮಹಮ್ಮದಾಲಿ ಶಾಂತಿಯಂಗಡಿ, ಅಶ್ರಫ್ ಕೈಕಂಬ ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡರು.