ಮಂಗಳೂರು: ಫೋರಂ ಫಿಝಾ ಮಾಲ್ನಲ್ಲಿ ಅಣಕು ಕಾರ್ಯಾಚರಣೆ
ಮಂಗಳೂರು, ಎ.8: ಅವಘಡ ಸಂದರ್ಭ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ನಗರದ ಪಾಂಡೇಶ್ವರದ ಪೊರಂ ಫಿಝಾ ಮಾಲ್ನಲ್ಲಿ ಸೋಮವಾರ ಅಣಕು ಕಾರ್ಯಾಚರಣೆ ನಡೆಯಿತು.
ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಇದ್ದಕ್ಕಿದ್ದಂತೆ ಸೈರನ್ ಮೊಳಗಿತು. ಮಾಲ್ನೊಳಗಿದ್ದ ನೂರಾರು ಮಂದಿ ಅಪಾಯದ ಮುನ್ಸೂಚನೆಯರಿತು ಹೊರಗೆ ಓಡಿ ಬಂದರು. ಭಾರೀ ಕೃತಕ ಮಳೆಗೆ ಫಿಝಾ ಮಾಲ್ನ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಯಿತು. ಅಲ್ಲಿ ಹಲವರು ಸಿಲುಕಿಕೊಂಡಿದ್ದಾರೆಂಬ ಸುದ್ದಿಯೂ ಹಬ್ಬಿತು. ತಕ್ಷಣ ಅಗ್ನಿಶಾಮಕ ದಳ, ಸಿಬ್ಬಂದಿ, ಸ್ವಯಂ ಸೇವಕರು ಕೂಡ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸುವ ಮೂಲಕ ಅಪಾಯದ ಸಂದರ್ಭ ಸಾರ್ವಜನಿಕರ ಪಾತ್ರದ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯಿತು.
ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ಕಾರ್ಯಾಚರಣೆ ತಂಡ, ಜಿಲ್ಲಾ ಆರೋಗ್ಯ ಇಲಾಖೆ, ಗೃಹರಕ್ಷಕದಳ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಫೋರಂ ಮಾಲ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಗ್ನಿ ಅವಘಡ, ಕಟ್ಟಡ ಕುಸಿತ, ನೆರೆ ಸಂದರ್ಭ ಕೈಗೊಳ್ಳಬೇಕಾದ ಸುರಕ್ಷಿತ ಕ್ರಮಗಳು, ಯಾವ್ಯಾವ ರೀತಿಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ತಿಳಿಸಲಾಯಿತು. ಇಂತಹ ಅವಘಡಗಳು ಉಂಟಾದಾಗ ಜನ ಯಾವ ರೀತಿ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು ಎಂಬ ಬಗ್ಗೆಯೂ ತಿಳಿಸಲಾಯಿತು.
ನೆರೆ ನೀರಿನಲ್ಲಿ ಮುಳುಗುವ ವ್ಯಕ್ತಿಯನ್ನು ದೋಣಿಯ ಮೂಲಕ ಹೇಗೆ ರಕ್ಷಿಸಬಹುದು ಎಂಬುದನ್ನು ಎನ್ಡಿಆರ್ಎಫ್ ಸಿಬ್ಬಂದಿ ತೋರಿಸಿಕೊಟ್ಟರು. ಇದಕ್ಕಾಗಿ ಮೂರು ರಕ್ಷಣಾ ಬೋಟ್ಗಳನ್ನು ತಂದು ರಕ್ಷಣಾ ಕಾರ್ಯಾಚರಣೆಯ ಪ್ರದರ್ಶನ ಮಾಡಲಾಯಿತು. ನೆರೆ ಸಂದರ್ಭ ಗಾಯಗೊಂಡವರನ್ನು ತುರ್ತು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್, ಬೈಕ್ ಆ್ಯಂಬುಲೆನ್ಸ್ಗಳನ್ನು ಬಳಸಿಕೊಂಡು ಆಸ್ಪತ್ರೆಗೆ ಸಾಗಿಸುವ ದೃಶ್ಯಗಳನ್ನೂ ಪ್ರದರ್ಶಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಅಗ್ನಿಶಾಮಕದಳ ಅಧಿಕಾರಿ ಟಿ.ಎನ್. ಶಿವಶಂಕರ್, ಮಳೆಗಾಲಕ್ಕೂ ಮುನ್ನ ತುರ್ತು ಕಾರ್ಯಾಚರಣೆಯ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂಬುದು ಸರಕಾರದ ಆದೇಶವಾಗಿದೆ. ಆ ಹಿನ್ನೆಲೆಯಲ್ಲಿ ಫೋರಂ ಮಾಲ್ನಲ್ಲಿ ಅಣುಕು ಕಾರ್ಯಾ ಚರಣೆ ನಡೆಸಿ ಜನರನ್ನು ಜಾಗೃತಿಗೊಳಿಸುವ ಪ್ರಯತ್ನ ನಡೆಸಲಾಗಿದೆ ಎಂದರು.
ಕಟ್ಟಡ ಕುಸಿತ
ಕಟ್ಟಡ ಕುಸಿತದ ಸಂದರ್ಭ ರಕ್ಷಣಾ ಕಾರ್ಯಾಚರಣೆ ಹೇಗಿರುತ್ತದೆ ಎಂಬುದನ್ನೂ ಅಣುಕು ಕಾರ್ಯಾಚರಣೆ ಮೂಲಕ ತೋರಿಸಲಾಯಿತು. ಕುಸಿತಗೊಂಡ ಕಟ್ಟಡದ ಅವಶೇಷಗಳಡಿ ವ್ಯಕ್ತಿ ಸಿಲುಕಿ ಹಾಕಿಕೊಂಡರೆ ವಿಕ್ಟಿಮ್ ಲೊಕೇಶನ್ ಕ್ಯಾಮರಾ ಬಳಸಿ ಆ ವ್ಯಕ್ತಿ ಯಾವ ಭಾಗದಲ್ಲಿ ಸಿಲುಕಿಕೊಂಡಿದ್ದಾನೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಬಳಿಕ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ವ್ಯವಸ್ಥಿತವಾಗಿ ಸಿಲುಕಿಕೊಂಡ ವ್ಯಕ್ತಿಯನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತದೆ. ಅಲ್ಲದೆ ಶ್ವಾನಗಳನ್ನೂ ಬಳಸಿಕೊಂಡು ವ್ಯಕ್ತಿ ಯಾವ ಭಾಗದಲ್ಲಿದ್ದಾನೆಂದು ಪತ್ತೆ ಹಚ್ಚಬಹುದು ಎಂಬುದನ್ನು ಮಾದರಿ ಕಾರ್ಯಾಚರಣೆ ಮೂಲಕ ರಕ್ಷಣಾ ತಂಡದವರು ತೋರಿಸಿಕೊಟ್ಟರು.
ಎನ್ಡಿಆರ್ಎಫ್ ಸುಬೀಷ್ ಕೆ.ಎಸ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್, ವಿಪತ್ತು ನಿರ್ವಹಣಾ ಅಧಿಕಾರಿ ವಿಜಯ ಕುಮಾರ್, ಗೃಹರಕ್ಷಕದಳದ ರಮೇಶ್ ಮತ್ತಿತರರಿದ್ದರು.